ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಎನ್.ಇ.ಎಸ್. ಮೈದಾನ(NES Ground)ದಲ್ಲಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆ(ಎನ್.ಇ.ಎಸ್) ಆಯೋಜಿಸಿದ್ದ ಅಮೃತ ಮಹೋತ್ಸವ ಸಮಾರೋಪ ಸಮಾರಂಭದ ಪ್ರಯುಕ್ತ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಮಲೆನಾಡಿನ ಸೊಬಗು ಸೂಚಿಸುವ ವಸ್ತುಗಳು, ಆಹಾರ ಪದಾರ್ಥ ಗಮನ ಸೆಳೆಯಿತು.
ಆಭರಣ ಮನೆ, ಆಹಾರ ಮನೆ, ಗೊಂಬೆ ಮನೆ ಹೀಗೆ ವಿವಿಧ ಹೆಸರಿನ ಸ್ಟಾಲ್ ಗಳನ್ನು ಸ್ಥಾಪಿಸಲಾಗಿತ್ತು. ಆಭರಣ ಮನೆಯಲ್ಲಿ ಹಳೆಯ ಕಾಲದ ಬೆಳ್ಳಿ ಆಭರಣಗಳು, ನೆಕ್ಲೆಸ್, ಅಲಂಕಾರಿಕ ವಸ್ತುಗಳು, ವಿವಿಧ ವಿನ್ಯಾಸದ ಚಾಕುಗಳನ್ನು ಇಡಲಾಗಿತ್ತು.
READ | ರಾಜ್ಯದಲ್ಲೇ ಅತಿ ಹೆಚ್ಚು ಮೊಬೈಲ್ ಟಾವರ್ ಶಿವಮೊಗ್ಗಕ್ಕೆ ಮಂಜೂರು
ಏನೇನು ವಿಶೇಷಗಳು?
- ಅಮೂಲ್ಯ ಶೋಧ ವಸ್ತು ಸಂಗ್ರಹಾಲಯದ ವಸ್ತುಗಳನ್ನು ಎನ್.ಇ.ಎಸ್. ಹಬ್ಬಕ್ಕೆ ತರಲಾಗಿತ್ತು. ಇದು ವಿದ್ಯಾರ್ಥಿಗಳ ಗಮನ ಸೆಳೆಯಿತು.
- ತಯಾರಿಸಿ ತರಲಾಗಿದ್ದ ಮಲೆನಾಡಿನ ಆಹಾರವನ್ನು ವಿದ್ಯಾರ್ಥಿಗಳು ಸವಿದರು. ರಾಗಿ ಕಿಲ್ಸ, ಮಂಡಕ್ಕಿ, ಅಂಟುಂಡೆ, ಗಾರ್ಗೆ ಬಾಯಲ್ಲಿ ನೀರು ಮೂಡುವಂತೆ ಮಾಡಿತು.
- ಕೋಣದ ಗಾಣದಿಂದ ಕಬ್ಬಿನ ಹಾಲನ್ನು ತಯಾರಿಸಲಾಯಿತು. ವಿದ್ಯಾರ್ಥಿಗಳು ಕುತೂಹಲದಿಂದ ವೀಕ್ಷಿಸಿದರು. ಗಾಣದ ಹಾಲನ್ನು ಸೇವಿಸಿದರು.
ಮೊಬೈಲ್’ನಿಂದ ದೂರವಿರಿ
ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮಾಡದೇ ಪುಸ್ತಕವನ್ನು ಓದಬೇಕು. ಮೊಬೈಲ್ ಅತಿಯಾದ ಬಳಕೆಯಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಗಂಗಾವತಿ ಪ್ರಾಣೇಶ್ ಸಲಹೆ ನೀಡಿದರು.
ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಕಡಿಮೆಯಾಗುತ್ತಿದೆ. ಇದರಿಂದಾಗಿ, ದೊಡ್ಡ ಗ್ರಂಥಗಳು ನಿಕೃಷ್ಟ ಸ್ಥಿತಿಯಲ್ಲಿವೆ. ಅದೆಷ್ಟೋ ಕವಿಗಳು, ಸಾಹಿತಿಗಳು ಬರೆಯುವುದನ್ನೇ ಬಿಟ್ಟಿದ್ದಾರೆ.ವಿದ್ಯಾರ್ಥಿಗಳು ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು.
ಎನ್.ಇ.ಎಸ್. ಅಮೃತ ಮಹೋತ್ಸವ ಸಂಭ್ರಮದಲ್ಲಿದ್ದು, ಇನ್ನಷ್ಟು ಉನ್ನತಕ್ಕೆ ಸಾಗಲಿ. 100 ವರ್ಷಗಳನ್ನು ಪೂರೈಸಲಿ. ಭಾರತಕ್ಕೆ ಬೇಕಾಗಿರುವುದು ಸುಸಂಸ್ಕೃತ ಶಿಕ್ಷಣ. ಅದಕ್ಕಾಗಿಯೇ ಎನ್.ಇ.ಪಿ. ಜಾರಿಗೆ ತರಲಾಗಿದೆ.
– ಪ್ರೊ.ಎಂ.ವೆಂಕಟೇಶ್ವರಲು, ಕುಲಪತಿ, ತುಮಕೂರು ವಿಶ್ವವಿದ್ಯಾಲಯ
ರ್ಯಾಂಕ್ ವಿದ್ಯಾರ್ಥಿಗಳು ಮತ್ತು ಎನ್ಇಎಸ್ ಕ್ರೀಡೋತ್ಸವದಲ್ಲಿ ವಿಜೇತರಿಗೆ ಸನ್ಮಾನಿಸಲಾಯಿತು. ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣರಾವ್, ಎನ್ಇಎಸ್ ಉಪಾಧ್ಯಕ್ಷ ಸಿ.ಆರ್.ನಾಗರಾಜ, ಕಾರ್ಯದರ್ಶಿ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್ ಉಪಸ್ಥಿತರಿದ್ದರು.