ಶಿಕಾರಿಪುರ: ಭಾರಿ ಪ್ರಯಾಸದ ಬಳಿಕ ಮುಖ್ಯಮಂತ್ರಿಗಳ ತವರು ಕ್ಷೇತ್ರ ಶಿಕಾರಿಪುರ ಪುರಸಭೆಯಲ್ಲಿ ಕಮಲ ಅರಳಿದೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಬಿಜೆಪಿಯ ಲಕ್ಷ್ಮಿ ಮಹಲಿಂಗಪ್ಪ ಮತ್ತು ಉಪಾಧ್ಯಕ್ಷರಾಗಿ ಸಾದಿಕ್ ಬಹುಮತ ಪಡೆಯುವ ಮೂಲಕ ಅಧಿಕಾರದ ಗದ್ದುಗೆ ಅಲಂಕರಿಸಿದ್ದಾರೆ.
ಶಿಕಾರಿಪುರ ಪುರಸಭೆ ಒಟ್ಟು 23 ಸ್ಥಾನಗಳಲ್ಲಿ 12 ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಅದೇ ಬಿಜೆಪಿಗೆ ಸಿಎಂ ಸ್ವಕ್ಷೇತ್ರದಲ್ಲೇ ಕೇವಲ 8 ಸೀಟು ಒಲಿದಿದ್ದವು. ಮೂವರು ಪಕ್ಷೇತರರು ಜಯ ಗಳಿಸಿದ್ದರು. ಕೈ ಅಧಿಕಾರ ಸ್ಥಾಪಿಸಬೇಕು ಅಷ್ಟರಲ್ಲಿಯೇ ಇಬ್ಬರು ಕಾಂಗ್ರೆಸ್ ಸದಸ್ಯರು ಪುರಸಭೆ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜತೆಗೆ, ಮೂವರು ಪಕ್ಷೇತರರು ಬಿಜೆಪಿ ಸೇರ್ಪಡೆಯಾಗಿದ್ದರು. ವಾರದ ಹಿಂದೆ ಮತ್ತೊಬ್ಬರು ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರಿದ್ದರು. ಈ ಎಲ್ಲ ಬೆಳವಣಿಗಳ ಮಧ್ಯೆ ಬಿಜೆಪಿ ಪಾಳಯದ ಸಂಖ್ಯಾಬಲ 11ಕ್ಕೆ ಏರಿಕೆ ಕಂಡಿತ್ತು. ಜತೆಗೆ, ಶಾಸಕರು ಮತ್ತು ಸಂಸದರು ಸಹ ಮತ ಚಲಾವಣೆ ಮಾಡಬಹುದಾದ್ದರಿಂದ ಸಂಖ್ಯಾಬಲ ಏರಿಕೆ ಕಂಡಿತ್ತು. ಇತ್ತ ಚುನಾವಣೆಯಲ್ಲಿ ಹೆಚ್ಚು ಸೀಟುಗಳನ್ನು ಪಡೆದರೂ ಕಾಂಗ್ರೆಸ್ 9ಕ್ಕೆ ಇಳಿಕೆಯಾಗಿತ್ತು.
ಯಾರಿಗೆ ಎಷ್ಟು ಮತ:
ಲಕ್ಷ್ಮಿ ಹಾಗೂ ಸಾದಿಕ್ ತಲಾ 12 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು. ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಮ್ಮ ಹಾಗೂ ಉಪಾಧ್ಯಕ್ಷ ದಸ್ತಗಿರಿ ತಲಾ 9 ಮತ ಪಡೆದು ಹಿನ್ನಡೆ ಕಂಡರು.
ಸಂಸದರ ಸಾಥ್: ಮಂಗಳವಾರ ನಡೆದ ಅಧದಯಕ್ಷ, ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆ ವೇಳೆ ಸಂಸದ ಬಿ.ವೈ.ರಾಘವೇಂದ್ರ ಅವರು ಅಲ್ಲಿಯೇ ಉಪಸ್ಥಿತರಿದ್ದರು. ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತ ಚಲಾಯಿಸಿದರು. ಫಲಿತಾಂಶ ಘೋಷಣೆ ಆಗುತ್ತಿದ್ದಂತೆಯೇ ಅಭ್ಯರ್ಥಿಗಳಿಗೆ ಶುಭ ಕೋರಿದರು.