ಸುದ್ದಿ ಕಣಜ.ಕಾಂ
ಬೆಂಗಳೂರು: ತಮ್ಮ ದಕ್ಷತೆ, ಕರ್ತವ್ಯ ಪ್ರಜ್ಞೆಯಿಂದ ಸದಾ ಸುದ್ದಿಯಲ್ಲೇ ಇರುವ ಗೃಹ ಇಲಾಖೆ ಕಾರ್ಯದರ್ಶಿ ಡಿ.ರೂಪಾ ಅವರು ಈಗ ಟ್ವೀಟ್ ಮಾಡಿ ಬೆಂಗಳೂರು ಸಂಚಾರ ಪೊಲೀಸರ ಕಿವಿ ಹಿಂಡಿದ್ದಾರೆ.
ಸೋಮವಾರ ತಮ್ಮ ಟ್ವಿಟರ್ ಖಾತೆಯಲ್ಲಿ “ನಗರದಲ್ಲಿ ಸಂಚಾರ ದಟ್ಟಣೆ ಉಂಟಾದಾಗ ಹಿರಿಯ ಅಧಿಕಾರಿಗಳಿಗೆ ಗೌರವ ಸಲ್ಲಿಸಿ, ಅವರ ಜತೆ ಕಾಲಹರಣ ಮಾಡುವ ಬದಲು ಸಂಚಾರ ದಟ್ಟಣೆ ತಡೆಗಟ್ಟಿ” ಎಂದು ಸಲಹೆ ನೀಡಿದ್ದಾರೆ.
ನಗರದ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಟ್ವೀಟ್ ಮಾಡಿ ಸೂಚನೆ ನೀಡಿದ್ದಾರೆ.
ನಗರದ 44 ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಮುಖ ಜಂಕ್ಷನ್ ಗಳಲ್ಲಿ ಕರ್ತವ್ಯ ನಿರತ ಸಂಚಾರ ವಿಭಾಗದ ಕಾನ್ ಸ್ಟೆಬಲ್, ಹೆಡ್ ಕಾನ್ ಸ್ಟೆಬಲ್, ಪಿಎಸ್ಐ ಸೇರಿದಂತೆ ಇತರೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಾರೆ.
ಈ ವೇಳೆ ಆ ರಸ್ತೆ ಮಾರ್ಗವಾಗಿ ಯಾರಾದರೂ ಹಿರಿಯ ಅಧಿಕಾರಿಗಳು ಬಂದರೆ ಅವರಿಗೆ ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸುವ ಬದಲು ಕರ್ತವ್ಯ ನಿರ್ವಹಿಸಿದರೆ ಸಾಕು. ಇದರಿಂದ ಸಾರ್ವಜನಿಕರಿಗೆ ಆಗಬಹುದಾದ ಸಂಚಾರ ದಟ್ಟಣೆಯನ್ನು ತಡೆಯಬಹುದು. ಜತೆಗೆ, ಜನ ಮೆಚ್ಚುಗೆಯನ್ನೂ ಪಡೆಯಬಹುದು ಎಂದು ತಿಳಿಸಿದ್ದಾರೆ.
ಟ್ವೀಟ್ ಗೆ ಕಾರಣವೇನು?
ನಗರದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಜನದಟ್ಟಣೆ ಹಾಗೂ ಟ್ರಾಫಿಕ್ ಜಾಮ್ ನಿಂದಾಗಿ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿ ಸಂಚಾರ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಈ ಮಾಹಿತಿಯನ್ನು ಬೇರೆಯ ಅಧಿಕಾರಿಗಳಿಗೆ ಸರಬರಾಜು ಮಾಡಿ, ಜನರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಲು ತಿಳಿಸಿದ್ದಾರೆ.
ಟ್ವೀಟ್ ಗೆ ಜನರಿಂದ ಮೆಚ್ಚುಗೆ, ದೂರು ತೋಡಿಕೊಂಡ ಜನ: ಡಿ. ರೂಪಾ ಅವರು ಸಿಬ್ಬಂದಿಯ ನಡೆಯ ಬಗ್ಗೆ ಟ್ವೀಟ್ ಮಾಡಿದ್ದೇ ಅದಕ್ಕೆ ಸಾಕಷ್ಟು ಜನ ಕಮೆಂಟ್ ಮಾಡಿದ್ದಾರೆ. ತಮ್ಮ ವ್ಯಾಪ್ತಿಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನೂ ತೋಡಿಕೊಂಡಿದ್ದಾರೆ. ಅವೆಲ್ಲವುಗಳಿಗೆ ಅತ್ಯಂತ ಸೌಜನ್ಯದಿಂದ ಡಿ.ರೂಪಾ ಅವರು ಉತ್ತರ ಕೂಡ ನೀಡಿದ್ದಾರೆ.