ಸುದ್ದಿ ಕಣಜ.ಕಾಂ
ಬೆಂಗಳೂರು: ನಗರದಲ್ಲಿ ಅಪರಾಧಗಳಿಗೆ ಮೂಗುದಾರ ಹಾಕಲು ಹಾಗೂ ಪೊಲೀಸರ ಮೇಲಿನ ಕಾರ್ಯ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಬೆಂಗಳೂರಿನಲ್ಲಿ ಹೊಸ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ಚಿಂತಿಸಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಾಯಿ ತಿಳಿಸಿದರು.
ಗುರುವಾರ ಏರ್ಪಡಿಸಿದ್ದ “ನಾವು ಸದಾ ನಿಮ್ಮ ಜೊತೆ” ಕಾರ್ಯಕ್ರಮದಲ್ಲಿ ಪೊಲೀಸರಿಗೆ ದ್ವಿಚಕ್ರ ವಾಹನಳನ್ನು ವಿತರಿಸಿ ಸಚಿವರು ಮಾತನಾಡಿದರು.
ಅಧಿಕ ಕಾರ್ಯ ಬಾಹುಳ್ಯ ಇರುವ ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳ ಕುರಿತು ವರದಿ ಕೇಳಲಾಗಿದೆ. ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ ತಕ್ಷಣ ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಪೊಲೀಸ್ ಇಲಾಖೆಯ ಕಾರ್ಯ ವೈಖರಿಗೆ ಇನ್ನಷ್ಟು ಕಸುವು ತುಂಬುವ ಕೆಲಸ ಆಗಬೇಕು. ಅದಕ್ಕಾಗಿ, ಪಿಎಸ್.ಐಗಳಿಗೆ ಜೀಪ್, ಡಿವೈಎಸ್.ಪಿಗಳಿಗೆ ಗುಣಮಟ್ಟದ ವಾಹನ ನೀಡುವ ಚಿಂತನೆ ಕೂಡ ನಡೆದಿದೆ ಎಂದು ಮಾಹಿತಿ ನೀಡಿದರು.
ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ, ಮುರುಗನ್, ಟಿವಿಎಸ್ ಕಂಪನಿಯ ಮುಖ್ಯಸ್ಥ ಮೇಘ ಶ್ಯಾಮ್ ಇತರರು ಪಾಲ್ಗೊಂಡಿದ್ದರು.