ಸುದ್ದಿ ಕಣಜ.ಕಾಂ
ಶಿವಮೊಗ್ಗ: ರೈಲ್ವೆ ಕೋಚಿಂಗ್ ಟರ್ಮಿನಲ್ ಅನ್ನು ತಾಳಗುಪ್ಪದಿಂದ ಕೋಟೆಗಂಗೂರಿಗೆ ಸ್ಥಳಾಂತರಿಸುವುದರ ಹಿಂದೆ ಭೂ ಮಾಫಿಯಾ ಒತ್ತಡವಿದೆ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ತೀ.ನಾ. ಶ್ರೀನಿವಾಸ್ ಆಪಾದಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋಚಿಂಗ್ ಟರ್ಮಿನಲ್ ಸ್ಥಾಪನೆಗೆ ತಾಳಗುಪ್ಪ ಸೂಕ್ತ ಸ್ಥಳವೆಂದು ರೈಲ್ವೆ ಇಲಾಖೆ ಪ್ರಕಟಣೆ ಹೊರಡಿಸಿತ್ತು. ಆದರೂ ಸಂಸದ ಬಿ.ವೈ.ರಾಘವೇಂದ್ರ ಅವರು ಸ್ಥಳಾಂತರಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಎದುರಿಸಲಾಗುತ್ತಿಲ್ಲ: ಸಂಸದರನ್ನು ವಿರೋಧಿಸಲು ಶಾಸಕ ಹರತಾಳು ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅವರೂ ಸುಮ್ಮನಿದ್ದಾರೆ ಎಂದು ಟೀಕಿಸಿದರು.
ಸಾಗರ ಪುರಸಭೆ ಸದಸ್ಯರಾದ ಸೈಯದ್ ಜಾಕೀರ್, ಲಲಿತಮ್ಮ, ಮುಖಂಡರಾದ ಎಲ್.ವಿ.ಸುಭಾಷ್, ಮಹಾಬಲೇಶ್ವರ ಶೇಟ್, ರಾಘವೇಂದ್ರ ಉಪಸ್ಥಿತರಿದ್ದರು.
ತಿ.ನಾ.ಶ್ರೀ ಆರೋಪಗಳೇನು?
- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಸ್ವಜಾತಿ ಪ್ರೇಮ ಬಿಡಬೇಕು.
- ಜಾತಿ ಓಲೈಕೆಗೆ ಪ್ರಬಲ ಸಮುದಾಯಕ್ಕೆ ಮಾತ್ರ ನಿಗಮ ಮಂಡಳಿ ಸ್ಥಾಪನೆ. ಇದರಿಂದ ಸಣ್ಣ ಪುಟ್ಟ ಜಾತಿಯವರಿಗೆ ಅನ್ಯಾಯ
- ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರ ವಿಫಲ.
- ಯಡಿಯೂರಪ್ಪ ಅವರಿಂದ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ನಿರ್ಲಕ್ಷ್ಯ
- ಸಂಸದ ಬಿ.ವೈ.ರಾಘವೇಂದ್ರ ಸಹ ಅಧಿವೇಶನದಲ್ಲಿ ಒಂದು ಮಾತನ್ನು ಆಡುತ್ತಿಲ್ಲ
- ಅಡಕೆ ಬೆಳೆಗಾರರ ಹಿತ ಕಾಪಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾಣ ಕುರುಡು.
- ಅಧಿಕಾರ ಸಿಕ್ಕ ನಂತರ ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ರಾಘವೇಂದ್ರ ಸರ್ವಾಧಿಕಾರಿ ಧೋರಣೆ
- ಎಂಪಿಎಂ ಅರಣ್ಯ ಭೂಮಿಯನ್ನು ಲೂಟಿ ಮಾಡುವ ಹುನ್ನಾರ