ಸುದ್ದಿ ಕಣಜ.ಕಾಂ
ಚಿಕ್ಕಮಗಳೂರು: ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿ, ಕರ್ನಾಟಕ ಬೆಳೆಗಾರರ ಒಕ್ಕೂಟದ ವತಿಯಿಂದ ಕಸ್ತೂರಿ ರಂಗನ್ ವರದಿ ವಿರೋಧಿ ಪ್ರತಿಭಟನೆ ಏರ್ಪಡಿಸಲಾಗಿತ್ತು.
ಪ್ರತಿಭಟನಾ ಸಭೆಯಲ್ಲಿ ವಿವಿಧ ಪಕ್ಷ, ಸಂಘಟನೆ, ಸಮಿತಿಗಳ ಮುಖಂಡರು ಭಾಗವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡುವಾಗ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಪ್ರತಿಭಟನಾ ಸಭೆಯಲ್ಲಿ ಗಣ್ಯರ ಅಭಿಪ್ರಾಯ
- ಕಸ್ತೂರಿರಂಗನ್ ವರದಿಯ ಕುರಿತು ಸಮಗ್ರವಾಗಿ ಚರ್ಚಿಸಲು ವಿಶೇಷ ಅಧಿವೇಶನ ಕರೆಯಬೇಕು
- ವರದಿಯನ್ನು ಯಥಾವತ್ತಾಗಿ ಜಾರಿಗೆ ತಂದರೆ ಆಗಬಹುದಾದ ಸಮಸ್ಯೆಗಳ ಕುರಿತು ನ್ಯಾಯಾಲಯಕ್ಕೆ ಮನವರಿಕೆ ಮಾಡಬೇಕು.
- ಸೆಟಲೈಟ್ ಆಧಾರಿತ ಸಮೀಕ್ಷೆಯಲ್ಲಿ ಕೃಷಿ ಭೂಮಿಯನ್ನು ಸೇರಿಸಲಾಗಿದೆ. ಹೀಗಾಗಿ, ಭೌತಿಕ ಸಮೀಕ್ಷೆ ನಡೆಸಬೇಕು.
- ಜನವಸತಿ, ಕೃಷಿ ಭೂಮಿಯನ್ನು ಹೊರತುಪಡಿಸಿ ಕೇರಳಾ ಮಾದರಿಯನ್ನು ಅಳವಡಿಸಬೇಕು. ಜಿಲ್ಲೆಯನ್ನು ಕೃಷಿ ವಲಯವಾಗಿ ಘೋಷಿಸಬೇಕು
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸಭೆಯಲ್ಲಿ ರಾಜಕೀಯ ಮುಖಂಡರಿಗೆ ಭಾಷಣಕ್ಕೆ ಅವಕಾಶ ಬೇಡ ಎಂದು ಪ್ರತಿಭಟನಾಕಾರರ ಆಕ್ರೋಶ ವ್ಯಕ್ತಪಡಿಸಿದರು. ಆದರೆ ಪ್ರತಿಭಟನಾ ಸಭೆಯಲ್ಲೂ ಶಾಸಕ ಟಿ.ಡಿ ರಾಜೇಗೌಡ, ಮಾಜಿ ಶಾಸಕ ಜೀವರಾಜ್ ನಡುವಿನ ವೈಮನಸ್ಸು ಮತ್ತೆ ಬೀದಿಗೆ ಬಿದ್ದಂತಾಗಿದೆ.
ಬಿಜೆಪಿ ಮುಖಂಡ ಡಿ.ಎನ್. ಜೀವರಾಜ್, ವಕೀಲ ಸುಧೀರ್ ಕುಮಾರ್ ಮುರೊಳ್ಳಿ, ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ವಿಜಯಕುಮಾರ್, ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿದರು.
ಮುಖಂಡರಾದ ಎಚ್.ಎಚ್.ದೇವರಾಜ್, ಬಿ.ಎಂ.ಸಂದೀಪ್, ಸಚಿನ್ ಮೀಗಾ, ಗಾಯತ್ರಿ ಶಾಂತೇಗೌಡ, ಎಚ್.ಟಿ.ಮೋಹನ್ ಕುಮಾರ್, ರಾಧಾ ಸುಂದರೇಶ್, ಕೆ.ಟಿ.ರಾಧಾಕೃಷ್ಣ, ಎಚ್.ಎಂ.ರೇಣುಕಾರಾಧ್ಯ, ಅನಂತ ಸುಬ್ಬರಾಯ, ಗುರುಶಾಂತಪ್ಪ ಎಚ್.ಡಿ.ತಮ್ಮಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Video Report