ಸುದ್ದಿ ಕಣಜ.ಕಾಂ
ಶಿವಮೊಗ್ಗ/ಬೆಂಗಳೂರು: ಗುಡವಿ ಪಕ್ಷಿಧಾಮ ಪುನಃಶ್ಚೇತನ ಯೋಜನೆ ಜಾರಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಮಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ನೈಟ್ ಕರ್ಫ್ಯೂ ಹಿಂಪಡೆದ ಸರ್ಕಾರ, ಕಾರಣವೇನು ಗೊತ್ತಾ?
ಬೆಂಗಳೂರಿನ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ನೀಡಿದ ಅವರು, ಸೊರಬ ತಾಲ್ಲೂಕು ಗುಡವಿ ಪಕ್ಷಿಧಾಮ ರಾಜ್ಯದಲ್ಲೇ ಅತಿದೊಡ್ಡ ಪಕ್ಷಿಧಾಮವಾಗಿದೆ. ಆದರೆ ಮೂಲ ಸೌಕರ್ಯಗಳ ಕೊರತೆಯಿಂದ ಗುಡವಿ ಪಕ್ಷಿಧಾಮ ಸೊರಗುತ್ತಿದೆ. ಗುಡವಿ ಪಕ್ಷಿಧಾಮ ಪುನಶ್ಚೇತನ ಯೋಜನೆ ಜಾರಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ತಜ್ಞರ ವರದಿಯಲ್ಲಿ ಏನಿದೆ?
- 15000 ಪಕ್ಷಿಗಳು ಮಳೆಗಾಲ, ಚಳಿಗಾಲದಲ್ಲಿ ಇಲ್ಲಿ ಬೀಡು ಬಿಡುತ್ತವೆ. 43 ಪಕ್ಷಿ ಕುಟುಂಬಗಳ 217 ಜಾತಿಯ ಪಕ್ಷಿಗಳನ್ನು ಗುಡವಿ ಪಕ್ಷಿಧಾಮದಲ್ಲಿ ಗುರುತಿಸಲಾಗಿದೆ.
- ಬೇರೆ ದೇಶಗಳಿಂದ ಇಲ್ಲಿಗೆ ಪಕ್ಷಿಗಳು ವಲಸೆ ಬರುತ್ತವೆ. 186 ಎಕರೆ ಪ್ರದೇಶಕ್ಕೆ ವ್ಯಾಪಿಸಿರುವ ಪಕ್ಷಿಗಳ ಆವಾಸ ಸ್ಥಾನ ಇದಾಗಿದೆ. ಇಲ್ಲಿ ಪಕ್ಷಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದೆ ಎಂಬ ಆತಂಕವನ್ನು ಪಕ್ಷಿ ತಜ್ಞರು ವ್ಯಕ್ತ ಮಾಡಿದ್ದಾರೆ ಎಂದು ಜೀವವೈವಿಧ್ಯ ಮಂಡಳಿ ನೀಡಿದ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
- ಗುಡವಿ ಸುತ್ತಲಿನ ಹಳ್ಳಿಗಳ ಪ್ರದೇಶಗಳಲ್ಲಿ ಭತ್ತ ಬೆಳೆಯುವ ಜೌಗು ಪ್ರದೇಶ ಕಡಿಮೆ ಆಗಿರುವುದು ಪಕ್ಷಿ ಸಂತತಿ ಅಭಿವೃದ್ಧಿಗೆ ಕಂಟಕ ತಂದಿದೆ. ಸುತ್ತಲಿನ ಕೃಷಿ ಭೂಮಿಗಳಲ್ಲಿ ಅತಿ ರಾಸಾಯನಿಕ ಔಷಧಿ ಸಿಂಪಡಣೆ ಸಹಾ ಮಾರಕ ಸಂಗತಿ ಎಂಬುದನ್ನು ತಜ್ಞರು ಎತ್ತಿ ಹೇಳಿದ್ದಾರೆ.
- ವನ್ಯಜೀವಿ ಅರಣ್ಯ ಇಲಾಖೆ ಗುಡವಿ ಪಕ್ಷಿಧಾಮದ ಕೆಳಹಂತದ ಸಿಬ್ಬಂದಿಗೆ ಅಗತ್ಯ ಪಗಾರ, ಸೌಲಭ್ಯ ಕಲ್ಪಿಸಬೇಕು.
- ಗುಡವಿ ಪಕ್ಷಿಧಾಮ ಇರುವ ಕೆರೆಗೆ ಬರುವ ನೀರು, ಇಲ್ಲಿಂದ ಹೊರಹೋಗುವ ನೀರು, ಹೂಳು ತುಂಬುವಿಕೆ ಇವೆಲ್ಲವುಗಳ ಪರಿಣಾಮ ಪಕ್ಷಿಗಳ ಸಂತತಿ ವೃದ್ಧಿಗೆ ಪೂರಕವೆ, ಮಾರಕವೆ ಎಂಬ ಬಗ್ಗೆ ತಜ್ಞ ಅಧ್ಯಯನ, ಅಭಿಪ್ರಾಯ ಅವಶ್ಯ ಎಂದು ವರದಿ ಹೇಳಿದೆ.
- ಮಂಗಗಳ ಹಾವಳಿಯಿಂದ ಪಕ್ಷಿಗಳ ಗೂಡು ಮೊಟ್ಟೆ, ಮರಿ ನಾಶವಾಗುತ್ತಿದೆ. ಇದಕ್ಕೆ ತಡೆ ಹಾಕಬೇಕು.
- ಪಕ್ಷಿಧಾಮ ಸುತ್ತಲಿನ ಬೇಲಿ, ಅಗಳ, ಮೆಶ್ ಬೇಲಿ ಇವೆಲ್ಲ ಹಾಳಾಗಿದ್ದು, ಪುನಃ ನಿರ್ಮಿಸಬೇಕಿದೆ. ಪಕ್ಷಿಧಾಮ ಭೂಮಿ ಅತಿಕ್ರಮಣ ಆಗದಂತೆ ತಡೆಬೇಲಿ ಬೇಕು.
- ವಿದ್ಯಾರ್ಥಿಗಳು, ಪಕ್ಷಿಪ್ರೇಮಿಗಳು, ಪ್ರವಾಸಿಗರು ಬಂದಾಗ ಅವಶ್ಯವಿರುವ ಸೌಕರ್ಯಗಳನ್ನು ಪಕ್ಷಿಧಾಮದ ಪ್ರವೇಶ ದ್ವಾರದ ಬಳಿ ಕಲ್ಪಿಸಬೇಕು.
- ಕ್ಯಾಂಟೀನ್, ಟಾಯ್ಲೆಟ್ ಮುಂತಾದ ಅಗತ್ಯ ಸೌಲಭ್ಯಬೇಕು. ಮಾಹಿತಿ ಕೇಂದ್ರ ಬೇಕು. ಆದರೆ ಅತಿಯಾದ ಕಾಂಕ್ರೀಟೀಕರಣ ಸಲ್ಲದು.
- ಪಕ್ಷಿಧಾಮದ ಬಳಿ ಯಾವುದೇ ಬೋಟಿಂಗ್ (ದೋಣಿ ಸೇವೆ) ಕಲ್ಪಿಸಬಾರದು. ಪಕ್ಷಿಗಳ ಓಡಾಟಕ್ಕೆ, ಸ್ವಾತಂತ್ರ್ಯಕ್ಕೆ ಭಂಗ ಉಂಟು ಮಾಡಬಾರದು.
- ಪಕ್ಷಿ ತಜ್ಞತೆ ಇರುವವರನ್ನು ಗೈಡ್ ಆಗಿ ನಿಯುಕ್ತಿ ಮಾಡಬೇಕು.
ಪಕ್ಷಿಧಾಮ ವನ್ಯಜೀವಿ ಅರಣ್ಯ ಇಲಾಖೆ ವಲಯ ಕಚೇರಿ ಗುಡವಿಯಲ್ಲೇ ಸ್ಥಾಪನೆ ಆಗಬೇಕು. ಸ್ಥಾನಿಕ ಜನರ ಸಹಭಾಗಿತ್ವದ ನಿರ್ವಹಣೆ ಸಮಿತಿ (ಇಕೊ ಡೆವಲೆಪ್ಮೆಂಟ್ ಕಮಿಟಿ) ರಚನೆ ಆಗಬೇಕು. ಪರಿಸರ ಪ್ರವಾಸ್ಯೋದ್ಯಮಕ್ಕೆ ಗುಡವಿಗೆ ಸಂಪರ್ಕ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದರು.