ಸುದ್ದಿ ಕಣಜ.ಕಾಂ
ಶಿರಾಳಕೊಪ್ಪ: ಕೆಲ ಜಾತಿಯ ಹಾವುಗಳು ತಮ್ಮದೇ ಜಾತಿಯ ಹಾವುಗಳನ್ನು ತಿನ್ನುತ್ತದೆ ಇದಕ್ಕೆ ಸ್ವಜಾತಿ ಭಕ್ಷಣೆ(cannibalism) ಎನ್ನುತ್ತಾರೆ. ಅದರಲ್ಲಿ ನಾಗರಹಾವು ಕೂಡ ಸ್ವಜಾತಿ ಭಕ್ಷಕ.
ಎರಡು ನಾಗರಹಾವುಗಳು ಒಂದನ್ನೊಂದು ಕಚ್ಚುತ್ತಾ ತಿನ್ನುವ ಪ್ರಯತ್ನ ಮಾಡುತ್ತವೆ. ಕೆಲವು ಸಲ ಸೋತ ಹಾವನ್ನು ತಿಂದರೆ ಕೆಲವು ಸಲ ಕಚ್ಚಿ ಹಾಗೇ ಬಿಟ್ಟು ಹೋಗುವುದಿದೆ.
ವಿಡಿಯೋ ರಿಪೋರ್ಟ್
ಎರಡು ಒಂದೇ ಜಾತಿಯ ವಿಷಪೂರಿತ ಹಾವುಗಳು ಒಂದನ್ನೊಂದು ಕಚ್ಚಿ ಗಾಯಗೊಳಿಸಿಕೊಂಡಾಗ ವಿಷದಿಂದ ಆ ಹಾವುಗಳು ಸಾಯುವುದಿಲ್ಲ. ಇದಕ್ಕೆ ಕಾರಣ ವಿಷದ ವಿರುದ್ಧ ಪ್ರತಿರೋಧ ಶಕ್ತಿ (immunity) ಬೆಳೆಸಿಕೊಂಡಿರುತ್ತವೆ. ಹೊರಗಿನ ಗಾಯಗಳಿಂದಾಗಿ ಹಾವು ಸಾಯಬಹುದೇ ವಿನಹ ವಿಷದಿಂದ ಸಾಯುವುದಿಲ್ಲ. ಕಾಳಿಂಗ ಸರ್ಪಗಳೂ ಸ್ವಜಾತಿ ಭಕ್ಷಣೆ ಮಾಡುತ್ತವೆ.
ಹಾವಿನ ವಿಷ(Snake venom): ಹಾವಿನ ವಿಷ ಕೆಲವು ಪ್ರೋಟೀನ್ಗಳಿಂದ ಕೂಡಿದ ಸಂಯೋಜನೆಯಾಗಿದೆ. ಇದನ್ನು ರೂಪಾಂತರಗೊಂಡ ಜೊಲ್ಲು (saliva) ಎನ್ನಬಹುದು. ಇದು ಬೇರೆ ಜೀವಿಗಳ ರಕ್ತ ಪರಿಚಲನೆಯೊಂದಿಗೆ ಬೆರೆತಾಗ ಅಪಾಯ ತರಬಲ್ಲದು. ಜೀರ್ಣಾಂಗಳ ಮೂಲಕ ದೇಹ ಸೇರಿದರೆ ಯಾವುದೇ ಅಪಾಯವಿಲ್ಲ. ಆದರೆ ಜೀರ್ಣಾಂಗಗಳಲ್ಲಿ ಯಾವುದೇ ಗಾಯ ಅಥವಾ ಹುಣ್ಣು (ulcer) ಇರಬಾರದು
ಲೇಖನ: ನಾಗರಾಜ್ ಬೆಳ್ಳೂರು ಉರಗ ಸಂರಕ್ಷಕ
ಶಿರಾಳಕೊಪ್ಪ ಪಟ್ಟಣದ ಎಂ.ಎನ್.ಪೆಟ್ರೋಲ್ ಬಂಕ್ ಸಮೀಪದ ತಡಗಣಿಗೆ ಹೋಗುವ ಮಾರ್ಗದಲ್ಲಿ ನಾಗರ ಹಾವುಗಳ ಮಧ್ಯೆ ಕಾಳಗ ನಡೆದಿದೆ. ಸಂಜೆ 4.30 ಗಂಟೆಗೆ ಶುರುವಾದ ಕಾಳಗ 6.15ರ ಸುಮಾರಿಗೆ ಬಿಟ್ಟಿತು. ಒಂದು ಹಾವು ಇನ್ನೊಂದನ್ನು ನುಂಗುತ್ತಿದ್ದಾಗ ಯಾರೋ ಮಧ್ಯದಲ್ಲಿ ಮಣ್ಣೆಸೆದ ಪರಿಣಾಮ ಅದು ಅರ್ಧಕ್ಕೆ ಬಿಟ್ಟು ಹೋಗಿದೆ. ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಯೊಡಗೂಡಿ ನಿತ್ರಾಣಗೊಂಡಿದ್ದ ನಾಗರ ಹಾವನ್ನು ಕಾಡಿಗೆ ಬಿಡಲಾಯಿತು. ಛಾಯಾಗ್ರಾಹಕ ಜಿ.ಎನ್. ಅರುಣ್ ಕುಮಾರ್ ಅವರು ಚಿತ್ರ ಮತ್ತು ವಿಡಿಯೋ ಅನ್ನು ಕ್ಲಿಕ್ಕಿಸಿದ್ದಾರೆ.