ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹಿರಿಯ ಸಾಹಿತಿ, 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಎಚ್.ಎಸ್. ವೆಂಕಟೇಶಮೂರ್ತಿ ನಾಯಕ ನಟರಾಗಿ ನಟಿಸಿರುವ ಚಿತ್ರ ಜನವರಿ 8ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.
ಇದೇ ಮೊದಲ ಸಲ ನಾಯಕ ನಟನಾಗಿ ಎಚ್ಎಸ್ವಿ ಬಣ್ಣ ಹಚ್ಚಿದ್ದು, ಇವರ ಅಭಿನಯದ ಅಮೃತವಾಹಿನಿ ಸಿನಿಮಾ ಶುಕ್ರವಾರದಿಂದ ಸಿನಿ ವೀಕ್ಷಕರ ಕಣ್ಮನ ಸೆಳೆಯಲಿದೆ. ಶಿವಮೊಗ್ಗದ ಭಾರತ್ ಸಿನಿಮಾಸ್ನಲ್ಲಿ ನಿತ್ಯ ಸಂಜೆ 5.30ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ಶಿವಮೊಗ್ಗ ಬೆಳ್ಳಿಮಂಡಲ, ಅಂಬೆಗಾಲು ಕಿರುಚಿತ್ರ ಸ್ಪರ್ಧೆಯ ಕಾರ್ಯದರ್ಶಿ ಡಾ.ಎಚ್.ಎಸ್. ನಾಗಭೂಷಣ ಅವರು ಗುರುವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಸಿನಿಮಾ, ಕಲ್ಕತ್ತಾದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಉತ್ತಮ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಶಿವಮೊಗ್ಗದ ಸಾಹಿತ್ಯಾಸಕ್ತರು, ಸಿನಿಮಾ, ಸಂಗೀತಾಸಕ್ತರು ಚಿತ್ರವನ್ನು ವೀಕ್ಷಿಸಿ, ಸದಭಿರುಚಿಯ ಚಿತ್ರವನ್ನು ಪ್ರ ತ್ಸಾಹಿಸಬೇಕು.
-ಡಾ.ಎಚ್.ಎಸ್. ನಾಗಭೂಷಣ್, ಅಂಬೆಗಾಲು ಕಿರುಚಿತ್ರ ಸ್ಪರ್ಧೆಯ ಕಾರ್ಯದರ್ಶಿ
ಆಡಿಯೋ ಹಿಟ್: ಅಮೃತವಾಹಿನಿ ಚಿತ್ರದ ಆಡಿಯೋ ಸಿಡಿ ಇತ್ತೀಚೆಗೆ ಬೆಂಗಳೂರಿನ ರೇಣುಕಾಂಬ ಚಿತ್ರ ಮಂದಿರ, ಶಿವಮೊಗ್ಗದ ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಬಿಡುಗಡೆಗೊಂಡಿದೆ. ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಾಡುಗಳಲ್ಲಿ ಪರಿಪಕ್ವ ಸಾಹಿತ್ಯವಿದೆ. ಸುಮಧುರ, ಸುಶ್ರಾವ್ಯ ಸಂಗೀತ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ । ಶ್ರೀಗಂಧ ಕೋಠಿಯಲ್ಲಿ ತಳ್ಳಾಟ, ನೂಕಾಟ, ವಾಗ್ವಾದ, ಕಾರಣವೇನು?
ಹಿರಿ ತಲೆಮಾರಿನ ತಲ್ಲಣ ಅನಾವರಣ: ಅಮೃತವಾಹಿನಿ ಸಿನಿಮಾ ಹಿರಿ ತಲೆಮಾರಿನ ಕಥೆಯಾಗಿದೆ. ವಯೋ ಸಹಜವಾಗಿ ಆವರಿಸಿಕೊಳ್ಳುವ ಹಿರಿತನ ಅದರೊಂದಿಗೆ ಉಂಟಾಗುವ ತಲ್ಲಣಗಳನ್ನು ಸೊಗಸಾಗಿ ವ್ಯಕ್ತಪಡಿಸಲಾಗಿದೆ. ಆದರೆ, ಈ ತಲ್ಲಣಗಳನ್ನು ಎದುರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಆದರೂ ಡಾ.ಎಚ್.ಎಸ್. ವೆಂಕಟೇಶ ಮೂರ್ತಿ ಉತ್ತಮವಾಗಿ ಅಭಿನಯಿಸಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನೊಂದು ಹಿರಿಯ ಪಾತ್ರದಲ್ಲಿ ಶಿವಮೊಗ್ಗದ ರಂಗಭೂಮಿ ಕಲಾವಿದ ವೈದ್ಯ ಅಭಿನಯಿಸಿದ್ದಾರೆ.
ಇದನ್ನೂ ಓದಿ । ಶಿವಮೊಗ್ಗದಲ್ಲಿ ಹಕ್ಕಿಗಳ ಸಾವು, ಕಾರಣವೇನು ಗೊತ್ತಾ?
ರಂಗಭೂಮಿ ಕಲಾವಿದೆ ಸುಪ್ರಿಯಾ ರಾವ್ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರ ಕಥೆಯನ್ನು ರಾಘವೇಂದ್ರ ಪಾಟೀಲ್ ಬರೆದಿದ್ದಾರೆ. ಚಿತ್ರಕಥೆಯೊಂದಿಗೆ ನರೇಂದ್ರ ಬಾಬು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಶಿವಾನಂದ್ ಸಂಭಾಷಣೆ, ಉಪಾಸನಾ ಮೋಹನ್ ಸಂಗೀತ, ಎಚ್.ಎಸ್.ವೆಂಕಟೇಶಮೂರ್ತಿ ಅವರ ಸಾಹಿತ್ಯ, ಕೆ.ಗಿರೀಶ್ ಕುಮಾರ್ ಸಂಕಲನ, ಗಿರಧರ್ ಧವನ್ ಛಾಯಾಗ್ರಹಣವಿದೆ.
ತಾರಾಗಣ: ಡಾ.ಎಚ್.ಎಸ್. ವೆಂಕಟೇಶ ಮೂರ್ತಿ, ವತ್ಸಲಾ ಮೋಹನ್, ವೈದ್ಯ ಶಿವಮೊಗ್ಗ, ಮಧು ಸಾಗರ್, ಮಂಜೇಶ್, ಮಂಜುನಾಥ ಬೂದಾಳ್, ಸುಪ್ರಿಯಾರಾವ್, ಆರ್.ಟಿ. ರಮಾ, ಗೀತಾ ಸೂರ್ಯವಂಶಿ, ಬೇಬಿ ಋತ್ವಿ, ಡಾ.ಶೈಲಾ, ಸಂತೋಷ್ ಕರ್ಕಿ ಮೊದಲಾದವರಿದ್ದಾರೆ.
ಬೆಳ್ಳಿಮಂಡಲ ಹಾಗೂ ಅಂಬೆಗಾಲು ಕಿರುಚಿತ್ರ ಸ್ಪರ್ಧೆಯ ಪ್ರಮುಖರಾದ ಜಿ. ವಿಜಯಕುಮಾರ್, ಮಂಜು ಮೊದಲಾದವರು ಉಪಸ್ಥಿತರಿದ್ದರು.