ಸುದ್ದಿ ಕಣಜ.ಕಾಂ
ಶಿವಮೊಗ್ಗ: ಪಶ್ಚಿಮಘಟ್ಟದ ವ್ಯಾಪ್ತಿಯ ಸಾಗರ, ತೀರ್ಥಹಳ್ಳಿ, ಹೊಸನಗರ, ಸೊರಬ ಪ್ರದೇಶದಲ್ಲಿ ಏಕ ಜಾತಿಯ ನೆಡುತೋಪು ಬೆಳೆಸಲು ಅವಕಾಶ ನೀಡಬಾರದು ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ್ ಹೆಗಡೆ ಅಶೀಸರ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ವೃಕ್ಷಲಕ್ಷ ಆಂದೋಲನ ಸೇರಿದಂತೆ ಹಲವು ಪರಿಸರ ಸಂಘಟನೆಗಳು ಶಿವಮೊಗ್ಗ ಮಲೆನಾಡು ಭಾಗದಲ್ಲಿ ಅಕೇಶಿಯಾ, ನೀಲಗಿರಿ ನೆಡುತೋಪು ನಿರ್ಮಾಣ ಕೈಬಿಡಬೇಕು ಎಂದು ಚಳವಳಿ ನಡೆಸುತ್ತಿವೆ. ಪರಿಸರ ಸಂಘಟನೆಗಳು ಸರಕಾರಕ್ಕೆ ಜೀವ ವೈವಿಧ್ಯ ಮಂಡಳಿಗೆ ಪತ್ರ, ಮನವಿಯನ್ನೂ ಸಲ್ಲಿಸಿವೆ. ರೈತ, ಕಿಸಾನ್ ಸಂಘಗಳು, ಸ್ಥಳೀಯ ತಾಲ್ಲೂಕು ಪಂಚಾಯಿತಿ ಅಕೇಶಿಯಾ ನೆಡುತೋಪು ನಿರ್ಮಾಣ ಮಲೆನಾಡಿನಲ್ಲಿ ಬೇಡ ಎಂದು ಆಗ್ರಹಿಸಿವೆ.
ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ನೀಡಿರುವ ವರದಿಯಲ್ಲಿನ ಸಲಹೆಗಳೇನು?
- ಏಕರೂಪದ ನೆಡುತೋಪುಗಳಿಂದ ಜೀವ ವೈವಿಧ್ಯತೆ ನಾಶವಾಗುತ್ತದೆ
- ಭೂಮಿಯ ಮೇಲ್ಮಣ್ಣಿನ ನಾಶ, ಜಲಮೂಲ ನಾಶ, ಕಾಡು ಪ್ರಾಣಿಗಳಿಗೆ ಆಹಾರ ಸಿಗುವುದಿಲ್ಲ
- ಗ್ರಾಮ ಸಾಮೂಹಿಕ ಭೂಮಿ ನಾಶ ಇತ್ಯಾದಿ ಗಂಭೀರ ದುಷ್ಪರಿಣಾಮಗಳು ಕಂಡು ಬಂದಿವೆ.
- ಜಲಾಶಯಗಳು ಹೂಳಿನಿಂದ ತುಂಬುತ್ತಿವೆ. ಕಾಡುಗಳು ಛಿದ್ರವಾಗಿವೆ
- ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ಅಧ್ಯಯನ ಕೇಂದ್ರ ಶಿವಮೊಗ್ಗ ಅರಣ್ಯ ಪರಿಸ್ಥಿತಿ ವರದಿಯಲ್ಲಿ ಏಕಜಾತಿ ನೆಡುತೋಪು ಮಲೆನಾಡಿಗೆ ಸಾಧು ಅಲ್ಲ ಎಂದು ಅಭಿಪ್ರಾಯ ನೀಡಿದೆ.
- ಒಂದೇ ಜಾತಿಯ ಸಸ್ಯದ ನೆಡುತೋಪುಗಳನ್ನು ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆಯುವುದರಿಂದ ಮಲೆನಾಡಿನ ನೆಲ, ಜಲ, ಕಾಡಿನ ಮೇಲೆ ಗಂಭೀರ ಪರಿಣಾಮ ಬೀರಿದೆ
- ಮಣ್ಣಿನ ಸಾರ ನಷ್ಟ, ಅಂತರ್ಜಲ ಕುಸಿತ, ಹುಲ್ಲು, ಗಿಡಮೂಲಿಕೆ, ಪಶು, ಪಕ್ಷಿ, ಕೀಟ, ಪಕ್ಷಿ ವೈವಿಧ್ಯತೆ ನಾಶವಾಗುವುದು, ಜಲಮೂಲ ಬತ್ತುವುದು, ವಾತಾವರಣ ತಾಪಮಾನ ಏರಿಕೆ ಈ ಅಪಾಯಗಳ ಬಗ್ಗೆ ಅಧ್ಯಯನ ವರದಿಗಳು ಎಚ್ಚರಿಸಿವೆ
- ಹಲವು ಅರಣ್ಯ, ಪರಿಸರ ವಿಜ್ಞಾನಿಗಳು ಮಲೆನಾಡು ಪ್ರದೇಶದಲ್ಲಿ ಸ್ಥಳೀಯ ಜಾತಿಯ ವಿವಿಧ ಹಣ್ಣಿನ, ಕಾಡಿನ ಜಾತಿಯ ಗಿಡ ಬೆಳೆಸಲು ಸಲಹೆ ನೀಡಲಾಗಿದೆ
ಎಂಪಿಎಂಗೆ ಗ್ರೀನ್ ಸಿಗ್ನಲ್ ನೀಡುವ ಮುನ್ನ ಸರ್ಕಾರ ಜಾಗರೂಕತೆ ವಹಿಸಲಿ: ಶಿವಮೊಗ್ಗ ಜಿಲ್ಲೆಯಲ್ಲಿ ಮೈಸೂರು ಕಾಗದ ಕಾರ್ಖಾನೆಗೆ ನೆಡುತೋಪು ಬೆಳೆಸಲು ಭೂಮಿ ಗುತ್ತಿಗೆ ನವೀಕರಣ ಮಾಡುತ್ತಿರುವ ಸಂದರ್ಭದಲ್ಲಿ ಈ ಎಲ್ಲ ಅಂಶ ಪರಿಗಣಿಸಬೇಕು ಎಂದು ಜೀವವೈವಿಧ್ಯ ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.
ಮಲೆನಾಡಿನ ಸಾಗರ, ಹೊಸನಗರ ತೀರ್ಥಹಳ್ಳಿ, ಸೊರಬ ಪ್ರದೇಶದಲ್ಲಿ ನೀಲಗಿರಿ, ಅಕೇಶಿಯಾ, ಮ್ಲಾಂಜಿಯಂ ಇತ್ಯಾದಿ ಏಕ ಸಸ್ಯ ನೆಡುತೋಪಿಗೆ ಅವಕಾಶ ನೀಡಬಾರದು. ಇದಕ್ಕೆ ಬದಲಾಗಿ ಮಲೆನಾಡಿನಲ್ಲಿ ಮಹಾಗನಿ, ಹೆಬ್ಬೇವು, ಬಿದಿರು, ಕದಂಬ, ಚಂದಕಲು ಮುಂತಾದ ಸ್ಥಳೀಯ ಜಾತಿಯ ಗಿಡಗಳನ್ನು ನೆಡುತೋಪುಗಳಲ್ಲಿ ಬೆಳೆಸಬೇಕು. ಈ ಬಗ್ಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ತೀರ್ಥಹಳ್ಳಿ, ಸಾಗರ, ಸೊರಬ ಶಾಸಕರು, ಶಿವಮೊಗ್ಗ ಜಿಲ್ಲಾಧಿಕಾರಿಗಳ ಗಮನ ಹರಿಸಲಿ.
– ಅನಂತ್ ಹೆಗಡೆ ಅಶೀಸರ, ಅಧ್ಯಕ್ಷರು, ಕರ್ನಾಟಕ ಜೀವ ವೈವಿಧ್ಯ ಮಂಡಳಿ