ಸುದ್ದಿ ಕಣಜ.ಕಾಂ
ಶಿರಾಳಕೊಪ್ಪ: ಬೋಗಿ ಗ್ರಾಮದಲ್ಲಿ ರಾಷ್ಟ್ರಕೂಟರ ಅವಧಿಯ ಹಲವು ಐತಿಹಾಸಿಕ ಕುರುಹುಗಳನ್ನು ಸ್ಥಳೀಯ ಇತಿಹಾಸ ಸಂಶೋಧಕ ರಮೇಶ್ ಬಿ.ಹಿರೇಜಂಬೂರ್ ಅವರು ಪತ್ತೆ ಮಾಡಿದ್ದಾರೆ.
ಗ್ರಾಮದ ಪೂರ್ವಕ್ಕೆ ಮಲ್ಲೇಶಪ್ಪ ಬಣಕಾರ ಎಂಬುವವರ ಅಡಕೆ ತೋಟದಲ್ಲಿ 140 ಸೆಂಟಿ ಮೀಟರ್ ಎತ್ತರ, 72 ಸೆಂ.ಮೀ ಅಗಲ ಹಾಗೂ 40 ಸೆಂ.ಮೀ ದಪ್ಪದ ಬೃಹತ್ ಗಾತ್ರದ ಗೋಸಾಸ ಕಲ್ಲು ದೊರೆತಿದೆ. ಅದರಲ್ಲಿ ನಾಲ್ಕು ಸಾಲಿನ ಶಾಸನ ಪಾಠ ಕೆತ್ತಲಾಗಿದೆ.
ರಾಷ್ಟ್ರಕೂಟರ ಮೂರನೇ ಕೃಷ್ಣನ ಅವಧಿಯಲ್ಲಿ ಬನವಾಸಿ 12000 ನಾಡನ್ನು ಕಲಿವಿಟ್ಟರಸ ಆಳುತ್ತಿರುವಾಗ, ಚೌಧರೆಯ ಗುಣಗನು ನಾಳ್ಗಾಮುಂಡನಾಗಿದ್ದ. ಈ ವೇಳೆಯಲ್ಲಿ ಊರ ಗಾವುಂಡರ ಹಾಳನೆಂಬ ಭಟನು ಹೋರಾಟದಲ್ಲಿ ದೇವಲೋಕಕ್ಕೆ ಹೋದ ಕಾರಣ ಗೋಸಾಸ ನಿಲ್ಲಿಸಲಾಗಿದೆ.
ಒಂದು ಸಾವಿರ ಗೋವುಗಳನ್ನು ದಾನ ನೀಡಿದಾಗ ಅದರ ನೆನಪು ಹಾಗೂ ಪ್ರತಿಷ್ಠೆ ಮತ್ತು ಇನ್ನೊಬ್ಬರಿಗೆ ಪ್ರೇರಣೆ ನೀಡುವ ಕಾರಣಕ್ಕೆ ಒಂದು ವಿಶೇಷ ಕಲ್ಲನ್ನು ನೆಡಲಾಗುತ್ತಿತ್ತು. ಇವುಗಳನ್ನು ಗೋಸಾಸ ಕಲ್ಲುಗಳು ಎಂದು ಕರೆಯಲಾಗುತ್ತದೆ. ಗೋಸಾಸಗಲ್ಲುಗಳು ಗೋದಾನಕ್ಕೆ ಸಂಬಂಧಿಸಿದ ಶಾಸನಗಳಾಗಿದ್ದು ಕನ್ನಡ ಶಾಸನಗಳಲ್ಲಿಯೇ ವಿಶಿಷ್ಟ ಎನಿಸಿವೆ.ಗ್ರಾಮದ ರಾಜು ವೆಂಕಪ್ಪರವರ ಗದ್ದೆಯಲ್ಲಿ 90 ಸೆಂ.ಮೀ ಎತ್ತರ, 40 ಸೆಂ.ಮೀ ಅಗಲ ಅಳತೆಯ ವಿಶೇಷ ಕೆತ್ತನೆಗಳಿರುವ ಶಿಲಾಫಲಕ ಪತ್ತೆಯಾಗಿದೆ.
ಫಲಕದ ಮದ್ಯದಲ್ಲಿ ಕಮಲದ ಹೂವಿನ ಮೇಲೆ ಕೋಣನ ತಲೆಯ ರಚನೆಯಿದೆ. ಅದರ ಮೇಲೆ ದೇವಿಯು ಎರಡೂ ಕೈಗಳಲ್ಲಿ ಕಮಲದ ಹೂಗಳನ್ನು ಹಿಡಿದು ಕೂತಿದ್ದಾಳೆ. ದೇವಿಯ ಶಿರೋಭಾಗದ ಎರಡೂ ಪಾಶ್ರ್ವಗಳಲ್ಲಿ ಆನೆಗಳು ಜಲಾಭಿಶೇಕಗೈಯುತ್ತಿವೆ.
ಕೆಳಭಾಗದ ಎರಡೂ ಕಡೆ ಚಾಮರಧಾರಿಗಳನ್ನು ಕೆತ್ತಲಾಗಿದೆ. ಫಲಕದ ಮೇಲ್ಭಾಗದಲ್ಲಿ ಒಂದು ಸಾಲಿನ ರಾಷ್ಟ್ರಕೂಟರ ಅವಧಿಯ ಪಾಠವಿದ್ದು ಚವಳ್ದರೆಯ ವಾಸಣ್ಣನು ದಾನ ನೀಡಿರಿವುದನ್ನು ಉಲ್ಲೇಖಿಸುತ್ತದೆ.
ಶಿಲ್ಪದ ಲಕ್ಷಣಗಳನ್ನು ಆಧರಿಸಿ ಅದೊಂದು ದುರ್ಗಾಲಕ್ಷ್ಮಿಯ ದೇವಸ್ಥಾನದ ಗರ್ಭಗುಡಿಯ ಮೇಲಿನ ಶಿಲಾಫಲಕವಾಗಿದ್ದು ಅದೇ ರೀತಿಯ ದುರ್ಗಾಲಕ್ಷ್ಮಿಯ ಮೂಲ ಶಿಲ್ಪ ಗರ್ಭಗುಡಿಯಲ್ಲಿ ಇದ್ದಿರಬಹುದಾಗಿದ್ದು ಈ ರೀತಿಯ ಲಕ್ಷಣಗಳಿರುವ ದುರ್ಗೆಯ ಶಿಲ್ಪ ದೊರೆತಿರುವುದು ಅಪರೂಪವಾಗಿದೆ ಎಂದು ಖ್ಯಾತ ಪ್ರಾಕ್ತಾನ ಶಾಸ್ತ್ರಜ್ಞ ಟಿ.ಎಂ.ಕೇಶವ್ ಅವರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ । ರಾಜ್ಯದ ಎಲ್ಲ ಪಂಚಾಯಿತಿಗಳಿಗೆ ಸೋಲಾರ್ ವ್ಯವಸ್ಥೆ
10ನೇ ಶತಮಾನದಲ್ಲಿ ದುರ್ಗಾದೇವಿ ಆರಾಧನೆ: ಶಿಲಾಫಲಕದ ಸ್ವಲ್ಪ ದೂರದಲ್ಲಿ ಅಲ್ಪ ಭಗ್ನವಾಗಿರುವ ಕೋಣನ ತಲೆ ಶಿಲ್ಪವು ಪತ್ತೆಯಾಗಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ಹತ್ತನೇ ಶತಮಾನದ ಅವಧಿಯಲ್ಲಿಯೇ ದುರ್ಗಾದೇವಿಯ ಆರಾಧನೆ ಇರುವುದು ಅಧಿಕೃತವಾಗಿ ದೃಢಪಟ್ಟಿದೆ. ಈಗಲೂ ಈ ಪ್ರದೇಶವನ್ನು ಮಾರಿ ಕಣಿವೆ ಎಂದು ಸ್ಥಳಿಯರು ಕರೆಯುತ್ತಾರೆ.
ರಾಷ್ಟ್ರಕೂಟ ನೇಗಿಲ ಚಿತ್ರವಿರುವ ಶಾಸನ: ಗ್ರಾಮದ ಸನಿಹದಲ್ಲಿರುವ ಕಾಳಿಗುಂಡಿಯ ಬಳಿ ರಾಷ್ಟ್ರಕೂಟರ ನೇಗಿಲಿನ ಚಿತ್ರವಿರುವ ತೃಟಿತ ಶಾಸನ ಪತ್ತೆಯಾಗಿದೆ. ಕೆಳಭಾಗದಲ್ಲಿ ಶಾಪಾಶಯದ ಮಾತ್ರ ಉಳಿದುಕೊಂಡಿದೆ. ಅಲ್ಲಿಯೇ 10ನೇ ಶತಮಾನದ ಅವಧಿಯ 140 ಸೆಂ.ಮೀ ಎತ್ತರ, 90 ಸೆಂ.ಮೀ ಅಗಲದ ಬೃಹತ್ ಮಹಾಸತಿಕಲ್ಲು ಹಾಗೂ ಭೈರವಿ ದೇವಿಯ ಶಿಲ್ಪಗಳ ಜೊತೆ ಪ್ರಾಚೀನ ಕೆಲವು ಶಾಸನಗಳ ತೃಟಿತ ಭಾಗಗಳು ಕಂಡುಬಂದಿವೆ.
ಗ್ರಾಮದ ಸೋಮ್ಲಾನಾಯ್ಕರ ಗದ್ದೆಯಲ್ಲಿ ರಾಮನಾಥ ಉಲ್ಲೇಖವಿರುವ ರೇವಂತ ಶಿಲ್ಪವಿದ್ದು ಅದರ ಬಳಿ ಕ್ರಿ ಶ 1415ರ ಅವಧಿಯ ವಿರೂಪಾಕ್ಷದೇವರ ಪಾಧಾರಾಧಕರಾದ ಶ್ರೀ ದೇವರಾಯ ಮಹಾರಾಜರ ಉಲ್ಲೇಖವಿರುವ ಅಪೂರ್ಣ ಶಾಸನ ಕಂಡುಬಂದಿದೆ.
ಶಾಸನ ಓದಲು ಸಹಕಾರ: ಶಾಸನಗಳನ್ನು ಓದಲು ಡಾ. ಜಗದೀಶ್, ಡಾ. ಜಾಗೀರ್ ದಾರ್ ಮಾರ್ಗದರ್ಶನ ಮಾಡಿದ್ದಾರೆ. ಶಾಸನ ಹಾಗೂ ಶಿಲ್ಪಗಳನ್ನು ಪತ್ತೆಮಾಡಲು ಗ್ರಾಮದ ಮುಖಂಡರಾದ ಮಾಜಿ ಜಿ.ಪಂ ಸದಸ್ಯ ಬಂಗಾರಿನಾಯ್ಕ, ಸತೀಶ್ ನಾಯ್ಕ್ , ಕುಮಾರ್, ಅಜ್ಜಪ್ಪಣ್ಣ, ರಾಜು ನಾಯ್ಕ್, ರಾಜು, ಮಹಮ್ಮದ್ ರಫಿ, ಹಬೀಬುಲ್ಲಾ ಸಹಕರಿಸಿರುತ್ತಾರೆ.