ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸುಪ್ರೀಂ ಕೋರ್ಟ್ ಸಮ್ಮುಖದಲ್ಲಿರುವ ಅಡಕೆ ಕ್ಯಾನ್ಸರ್ ಕಾರಕ ಎಂಬ ವಿಚಾರವೇ ಮಲೆನಾಡಿನ ಅಡಕೆ ಬೆಳೆಗಾರರ ನಿದ್ದೆಗೆಡಿಸಿದೆ. ಪರಿಸ್ಥಿತಿ ಹೀಗಿರುವಾಗ, ರಾಜ್ಯ ಸರ್ಕಾರದ ಅಧಿಕೃತ ವೆಬ್ ಸೈಟ್ ಆದ ಕೃಷಿ ಮಾರಾಟ ವಾಹಿನಿಯಲ್ಲಿ ಅಡಕೆ ಮತ್ತು ವೀಳ್ಯದೆಲೆಯನ್ನು ಮಾದಕ ವಸ್ತುಗಳ ಪಟ್ಟಿಗೆ ಸೇರಿಸಿ ಎಡವಟ್ಟು ಮಾಡಲಾಗಿದೆ.
ಈ ವೆಬ್ ಸೈಟಿನ ಔಷಧಿ ಮತ್ತು ಮಾದಕ ಉತ್ತೇಜಕ ಪಟ್ಟಿಯಲ್ಲಿ ಅಡಕೆಯನ್ನು ಸೇರಿಸಲಾಗಿದೆ. ಈ ಪ್ರಮಾದಕ್ಕೆ ಅಡಕೆ ಬೆಳೆಗಾರರು ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಅಡಕೆ ಮಲೆನಾಡಿನ ಅಸ್ಮಿತೆ: ಅಡಕೆಗೆ ಪುರಾತನ ಇತಿಹಾಸವಿದೆ. ಆಯುರ್ವೇದಲ್ಲಿ ವಿಶೇಷ ಸ್ಥಾನವಿದೆ. ಶುಭ ಕಾರ್ಯಗಳಿಗೆ ಪೂಜೆ ಬಳಸುವ ಪರಿಪಾಠವೂ ಇದೆ. ಇಂತಹ ಅಡಕೆಯನ್ನು ಮಾದಕ ವಸ್ತುಗಳ ಪಟ್ಟಿಗೆ ಸೇರಿಸಿ ಪ್ರಮಾದ ಮಾಡಲಾಗಿದೆ.
ಅದರಲ್ಲೂ ಮಲೆನಾಡಿಗರ ಪಾಲಿಗೆ ಅಡಕೆ ಜೀವನದ ಆಧಾರ ಹೀಗಿರುವಾಗ ಸರ್ಕಾರಿ ವೆಬ್ ಸೈಟ್ ನಲ್ಲಿಯೇ ಇಂತಹ ತಪ್ಪಾಗಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಜತೆಗೆ, ಅಡಕೆ ಬೆಳೆಗಾರರು ಇದನ್ನು ವಿರೋಧಿಸಿದ್ದಾರೆ. ತಪ್ಪು ಕಣ್ತಪ್ಪಿನಿಂದ ಆಗಿರುವುದಾಗಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ.