ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ರೈಲು ನಿಲ್ದಾಣದ ಸುತ್ತ ಗುರುವಾರ ಪೊಲೀಸರನ್ನು ನಿಯೋಜಿಸಲಾಗಿತ್ತು.
ವಿರೋಧಗಳ ನಡುವೆಯೂ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ರೈಲು ತಡೆ ಚಳವಳಿಗೆ ಕರೆ ನೀಡಿತ್ತು. ಇದನ್ನು ಬೆಂಬಲಿಸಿ ಶಿವಮೊಗ್ಗ ಜಿಲ್ಲಾ ರೈತ ಸಂಘಟನೆಗಳು ಹಾಗೂ ಇತರೆ ಸಂಘ ಸಂಸ್ಥೆಗಳು ಬೆಂಬಲ ನೀಡಿ ರೈಲು ತಡೆ ಚಳವಳಿಗೆ ಮುಂದಾಗಿದ್ದವು.
ರೈತ ವಿರೋಧಿ ಕಾಯ್ದೆಗಳನ್ನು ಚರ್ಚೆ ಮಾಡದೇ ಜಾರಿಗೆ ತರಲಾಗಿದೆ. ಒಂದುವೇಳೆ, ಸರ್ಕಾರ ಚಳವಳಿಯನ್ನು ಹಗುರವಾಗಿ ಪರಿಗಣಿಸಿದ್ದಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಲಾಗುವುದು. ಗ್ರಾಮೀಣ ಪ್ರದೇಶದಲ್ಲೂ ಹೋರಾಟ ರೂಪಿಸಲಾಗುವುದು.
– ಕೆ.ಟಿ.ಗಂಗಾಧರ್, ರೈತ ಮುಖಂಡ
ಪೊಲೀಸರು ರೈಲ್ ರೋಕೊಗೆ ಅವಕಾಶ ನೀಡಲಿಲ್ಲ. ನಿಲ್ದಾಣದ ಪ್ರವೇಶ ದ್ವಾರದಲ್ಲೇ ತಡೆದಿದ್ದರಿಂದ ರೈತರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ರೈತರನ್ನು ಪ್ರವೇಶ ದ್ವಾರದಲ್ಲೇ ತಡೆದಿದ್ದಕ್ಕೆ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ವಿರೋಧ ಹೆಚ್ಚಾದಂತೆ ಪೊಲೀಸರು ಆವರಣದಲ್ಲಿಯೇ ಪ್ರತಿಭಟನೆಗೆ ಅನುವು ಮಾಡಿಕೊಟ್ಟರು.
ಉತ್ತರ ಭಾರತದಲ್ಲಿ ಮಾಡಿರುವಂತೆ ಶಿವಮೊಗ್ಗದಲ್ಲೂ ಕಿಸಾನ್ ಪಂಚಾಯತ್ ಪ್ರಾರಂಭವಾಗಲಿದೆ. ಕೇಂದ್ರದ ರೈತ ನಾಯಕರಾದ ಬಲವೀರ್ ಸಿಂಗ್ ರಾಜೇವಾಡ್, ಟಿಕಾಯತ್ ಇವರನ್ನು ಬರುವ ಮಾರ್ಚ್ನಲ್ಲಿ ಶಿವಮೊಗ್ಗ ಕರೆಸಲಾಗುವುದು. ಅವರೇ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
-ಎಚ್.ಆರ್.ಬಸವರಾಜಪ್ಪ, ರೈತ ಮುಖಂಡ
ಬಣ ಭಿನ್ನವಾದರೂ ಒಂದೇ ವೇದಿಕೆಯಲ್ಲಿ ಹೋರಾಟ | ಕೆ.ಟಿ ಗಂಗಾಧರ್ ಮತ್ತು ಎಚ್.ಆರ್.ಬಸವರಾಜಪ್ಪ ಅವರದ್ದು ಬಣ ಬೇರೆಯದ್ದಾದರೂ ಕೃಷಿ ಕಾಯ್ದೆ ವಿರೋಧಿಸಿ ಗುರುವಾರ ನಡೆದ ರೈಲ್ ರೋಕೋ ಚಳವಳಿಯಲ್ಲಿ ಬಣ ಮರೆತು ಭಾಗವಹಿಸಿದ್ದರು.
ವಿವಿಧ ಸಂಘಟನೆಯ ಪ್ರಮುಖರಾದ ಶಿವಮೂರ್ತಿ, ಹಿಟ್ಟೂರು ರಾಜು, ಜಗದೀಶ್, ಹಾಲೇಶಪ್ಪ, ಕೆ.ಎಲ್.ಅಶೋಕ್ ಉಪಸ್ಥಿತರಿದ್ದರು.