ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬೈಪಾಸ್ ರಸ್ತೆಯ ಊರುಗಡೂರು ಸಮೀಪದ ಸೂಡಾ ಲೇಔಟ್ ನಲ್ಲಿ ಆಗಿರುವ ಒತ್ತುವರಿಯನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ತಿಳಿಸಿದ್ದಾರೆ.
READ | ಖಾಸಗಿ ಬಸ್ ನಿಲ್ದಾಣದಲ್ಲಿ ಪೊಲೀಸರಿಂದ ಗಾಂಧಿಗಿರಿ
ನಿವೇಶನ ಒತ್ತುವರಿಯ ಬಗ್ಗೆ ದೂರುಗಳು ಬಂದ ಹಿನ್ನೆಲೆ ಮೇಯರ್ ಸುನೀತಾ ಅಣ್ಣಪ್ಪ ಹಾಗೂ ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸೂಡಾಕ್ಕೆ ಸೇರಿದ ಜಾಗದಲ್ಲಿ ಕೆಲವರು ಅನಧಿಕೃತ ಶೆಡ್ ನಿರ್ಮಿಸಿದ್ದಾರೆ. ರಸ್ತೆ ಸಂಚಾರಕ್ಕೆ ತೊಂದರೆಯಾಗುವಂತೆ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಈ ಬಗ್ಗೆ ದೂರುಗಳು ಬಂದಿವೆ. ಕೂಡಲೇ ಇದನ್ನು ತೆರವುಗೊಳಿಸಲಾಗುವುದು ಎಂದು ಜ್ಯೋತಿಪ್ರಕಾಶ್ ಹೇಳಿದರು.
ಉದ್ಯಾನಕ್ಕಾಗಿ ಬಿಟ್ಟಿರುವ ಜಾಗವನ್ನು ಒತ್ತುವರಿ ಮಾಡಲಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಹೈಟೆನ್ಷನ್ ವೈರ್ ಕೆಳಗಡೆಯೇ ಶೆಡ್ ನಿರ್ಮಿಸಿಕೊಳ್ಳಲಾಗಿದೆ. ಜತೆಗೆ, ನೀರು, ವಿದ್ಯುತ್ ಸೌಲಭ್ಯ ಕೂಡ ಪಡೆಯುತ್ತಿದ್ದಾರೆ ಎಂದರು.
ಕಳೆದ ಮೂರು ದಶಕಗಳ ಹಿಂದೆ ಬಡಾವಣೆ ನಿರ್ಮಾಣಕ್ಕಾಗಿ ಜಮೀನು ಪಡೆದು ಪರಿಹಾರ ಕೂಡ ನೀಡಲಾಗಿದೆ. ಆದರೆ, ಈ ಬಡಾವಣೆಯ ಪ್ರಕರಣ ಹೈಕೋರ್ಟ್ ನಲ್ಲಿತ್ತು. ಹೀಗಾಗಿ, ನಿರ್ಮಾಣ ಕಾರ್ಯ ವಿಳಂಬವಾಗಿದೆ. ಈಗ ಎಲ್ಲವು ಬಗೆಹರಿದಿದೆ. 2-3 ದಿನಗಳಲ್ಲಿ ಈ ಬಗ್ಗೆ ಕಾರ್ಯಾದೇಶ ನೀಡುವುದಾಗಿ ಹೇಳಿದರು.
ಹೆಚ್ಚಿನ ಪರಿಹಾರಕ್ಕೆ ಸಿಎಂಗೆ ಮನವಿ | ಊರುಗಡೂರು ಸಮೀಪ 62 ಎಕರೆ 30 ಗುಂಟೆಯಲ್ಲಿ ಬಡಾವಣೆ ನಿರ್ಮಿಸಲಾಗುವುದು. ನಿವೇಶನಕ್ಕಾಗಿ ಜಮೀನು ನೀಡಿರುವ ರೈತರಿಗೆ ಒಂದು ಎಕರೆಗೆ 40/60 ಅಳತೆಯೆ ಒಂದು ನಿವೇಶನ ಕೊಡಲಾಗುವುದು. ಜತೆಗೆ, ಈಗಾಗಲೇ ನೀಡಲಾಗಿರುವ ಪರಿಹಾರ ಕಡಿಮೆ ಆಗಿರುವುದಾಗಿ ರೈತರು ತಿಳಿಸಿದ್ದಾರೆ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಚರ್ಚಿಸಿದ್ದು, ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದರು.
ಉಪ ಮೇಯರ್ ಶಂಕರ್ ಗನ್ನಿ, ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಜ್ಞಾನೇಶ್ವರ್, ಕೆ.ವಿ.ಅಣ್ಣಪ್ಪ ಉಪಸ್ಥಿತರಿದ್ದರು.
https://www.suddikanaja.com/2020/11/23/railway-terminal-at-koteganguru-in-shivamogga/