ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಿಸುವುದಕ್ಕಾಗಿ ರಾಜ್ಯದಾದ್ಯಂತ ಕರ್ಫ್ಯೂ ವಿಧಿಸಿದೆ. ಆದರೆ, ಇದರಿಂದಾಗಿ ಕೂಲಿ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಆಟೋ ಚಾಲಕರು, ಸಣ್ಣ ವ್ಯಾಪಾರಿಗಳ ಖಾತೆಗೆ 25 ಸಾವಿರ ರೂಪಾಯಿ ಜಮಾ ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಆಗ್ರಹಿಸಿದರು.
READ | ಹೇಗಿದೆ ವೀಕೆಂಡ್ ಕರ್ಫ್ಯೂ 2ನೇ ದಿನ, ಜನರ ಓಡಾಟ ಇದೆಯೇ?
ಕೊರೊನಾ ತಡೆಗೆ ಸರ್ಕಾರ ವಿಫಲ | ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ 2ನೇ ಅಲೆ ತಡೆಯುವಲ್ಲಿ ವಿಫಲವಾಗಿವೆ. ಅಗತ್ಯವಿರುವ ರೋಗಿಗಳಿಗೆ ಆಮ್ಲಜನಕ ಸಿಗುತ್ತಿಲ್ಲ. ಈ ಬಗ್ಗೆ ನ್ಯಾಯಾಲಯಗಳು ಸಹ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದೆ ಎಂದು ತಿಳಿಸಿದರು.
ಬಿಜೆಪಿ ಕಾರ್ಯಕರ್ತರ ಕೈಯಲ್ಲಿ ರೆಮಿಡಿಸಿವರ್ | ರಾಜ್ಯದ ಹಲವೆಡೆ ರೆಮಿಡಿಸಿವರ್ ಇಂಜೆಕ್ಷನ್ ಬಿಜೆಪಿ ಕಾರ್ಯಕರ್ತರ ಮನೆಯಲ್ಲಿ ಸಿಕ್ಕಿವೆ. ಜತೆಗೆ, ನಕಲಿ ಇಂಜೆಕ್ಷನ್, ಬ್ಲ್ಯಾಕ್ ನಲ್ಲಿ ಮಾರಾಟ ಮಾಡುವುದು ಕಂಡುಬರುತ್ತಿದೆ.ಇದನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳ ತವರು ಕ್ಷೇತ್ರ ಶಿವಮೊಗ್ಗದಲ್ಲಿಯೇ ಸರಿಯಾದ ವ್ಯವಸ್ಥೆ ಇಲ್ಲ. ಬೆಡ್, ಇಂಜೆಕ್ಷನ್ ಮತ್ತು ಲಸಿಕೆಯ ಲಭ್ಯತೆಯ ಬಗ್ಗೆ ಸೂಚನಾ ಫಲಕದಲ್ಲಿ ನಮೂದಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಆದರೆ, ಇದುವರೆಗೆ ಕ್ರಮವಹಿಸಿಲ್ಲ. ರೋಗಿಗಳಿಗೆ ಭಾರಿ ಗೊಂದಲ ಉಂಟಾಗುತ್ತಿದೆ ಎಂದು ಆರೋಪಿಸಿದರು.
ಜೂಮ್ ನಲ್ಲಿ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಎಚ್.ಚಂದ್ರಭೂಪಾಲ್, ಸೌಗಂಧಿಕ ಉಪಸ್ಥಿತರಿದ್ದರು.
https://www.suddikanaja.com/2021/01/19/legal-metrology-department-booked-cases-in-shivamogga/