ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಎರಡನೇ ಅಲೆಗೆ ಬ್ರೇಕ್ ಹಾಕುವ ಕಾರಣಕ್ಕೆ ರಾಜ್ಯ ಸರ್ಕಾರ 14 ದಿನಗಳ ಲಾಕ್ ಡೌನ್ ಘೋಷಿಸಿದೆ. ಅದರ ಮೊದಲನೇ ದಿನವಾದ ಬುಧವಾರ ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ.
ರಿಲ್ಯಾಕ್ಸ್ ಅವಧಿಯಲ್ಲಿ ಬೆಳಗ್ಗೆ 6 ಗಂಟೆಗೆ ನಗರದ ಹಲವೆಡೆ ಮದ್ಯದ ಅಂಗಡಿಗಳನ್ನು ತೆರೆಯಲಾಗಿತ್ತು. ಇನ್ನುಳಿದಂತೆ, ದಿನಸಿ, ತರಕಾರಿ ಮಾರಾಟ 7.30 ಗಂಟೆ ನಂತರ ಆರಂಭವಾಗಿದೆ. ಮದ್ಯದಂಗಡಿ ಹೊರತು ಎಲ್ಲಿಯೂ ಜನರ ನೂಕುನುಗ್ಗಲು ಕಾಣಿಸಲಿಲ್ಲ.
6ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಆದರೆ, ಮಧ್ಯಾಹ್ನ 12 ಗಂಟೆಯವರೆಗೂ ನಗರದಲ್ಲಿ ವಾಹನಗಳ ಸಂಚಾರವಿತ್ತು. ಪೊಲೀಸರು ಪ್ರಮುಖ ವೃತ್ತಗಳಲ್ಲಿ ಗಸ್ತಿನಲ್ಲಿದ್ದು, ಅನಗತ್ಯವಾಗಿ ಓಡಾಡುವವರ ಮೇಲೆ ಕಣ್ಣಿದ್ದಾರೆ.
ಸಕ್ರ್ಯೂಟ್ ಹೌಸ್, ಅಶೋಕ ವೃತ್ತ, ಬಿ.ಎಚ್.ರಸ್ತೆ, ಅಮೀರ್ ಅಹ್ಮದ್ ವೃತ್ತ, ಗೋಪಿ ಸರ್ಕಲ್, ಮಹಾವೀರ ವೃತ್ತ, ಕೋರ್ಟ್ ಸರ್ಕಲ್, ಜೈಲ್ ಸರ್ಕಲ್, ಲಕ್ಷ್ಮೀ ಟಾಕೀಸ್, ಪೊಲೀಸ್ ಚೌಕಿ, ಆಲ್ಕೋಳ ವೃತ್ತ ಹೀಗೆ ಪ್ರಮುಖ ವೃತ್ತಗಳಲ್ಲಿ ಪೊಲೀಸ್ ಬಂದೋಬಸ್ತ್ ಇದೆ.
ನಗರದ ಹಲವೆಡೆ ಭೇಟಿ ನೀಡಿದ್ದೇನೆ. ಪೊಲೀಸರ ಬಿಗಿ ಬಂದೋಬಸ್ತ್ ಮಾಡಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಇದೆ. ಎಲ್ಲ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಆದರೆ, ಅಲ್ಲಲ್ಲಿ ವಾಹನಗಳ ಓಡಾಟವಿದ್ದು ಅವುಗಳನ್ನು ಪೊಲೀಸರು ನಿಯಂತ್ರಿಸುತ್ತಿದ್ದಾರೆ. ಮುಂದೆಯೂ ಇದೇ ರೀತಿ ಜನರು ನೀಡಬೇಕು.
– ಕೆ.ಬಿ.ಶಿವಕುಮಾರ್, ಜಿಲ್ಲಾಧಿಕಾರಿ
ಅಂಗಡಿ ಮುಂಗಟ್ಟುಗಳು 10.30ರ ಹೊತ್ತಿಗೆ ಎಲ್ಲ ಬಂದ್ ಆಗಿವೆ. ಆದರೆ, ವಾಹನಗಳ ಸಂಚಾರ ಅಲ್ಲಲ್ಲಿ ಕಂಡುಬರುತ್ತಿದೆ. ಹೆಚ್ಚುವರಿ ಎಸ್.ಪಿ. ಡಾ.ಎಚ್.ಟಿ.ಶೇಖರ್ ಅವರು ಫೀಲ್ಡಿಗಿಳಿದು ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರಿಗೆ ದಂಡ ವಿಧಿಸಿದ್ದಾರೆ. ಜತೆಗೆ, ಕೆಲವೆಡೆ ದ್ವಿಚಕ್ರ ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ನಗರದ ಹಲವೆಡೆ ಸಂಚರಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಬಸ್ ನಿಲ್ದಾಣ ಖಾಲಿ ಖಾಲಿ | ಖಾಸಗಿ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಯಾವುದೇ ಪ್ರಯಾಣಿಕರಾಗಲಿ, ಬಸ್ ಇಲ್ಲದೇ ಬಿಕೋ ಎನ್ನುತ್ತಿವೆ. ಸರ್ಕಾರ ಸಾರಿಗೆಗೂ ನಿರ್ಬಂಧ ಹೇರಿರುವುದರಿಂದ ಯಾವುದೇ ಬಸ್ ಇಂದು ರಸ್ತೆಗಿಳಿದಿಲ್ಲ. ಜತೆಗೆ, ಆಟೋ ಸಂಚಾರವೂ ಇಲ್ಲ.
https://www.suddikanaja.com/2021/01/22/hunasodu-gelatin-blast/