ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶನಿವಾರ ನಗರದ ಗಾಂಧಿ ಪಾರ್ಕ್ ಮುಂದೆ ಬಸವೇಶ್ವರ ಪುತ್ಥಳಿಯನ್ನು ಅನಾವರಣಗೊಳಿಸಿದರು.
ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಿಂದ ವರ್ಚ್ಯುವಲ್ ಹೋಸ್ಟಿಂಗ್ ಮೂಲಕ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಬಿ.ಎಸ್.ವೈ. ಕಾಯಕ ಯೋಗಿ ಬಸವಣ್ಣನವರನ್ನು ಮುಕ್ತ ಕಂಠದಿಂದ ಹೊಗಳಿದರು. 12ನೇ ಶತಮಾನದಲ್ಲಿ ವಚನಗಳ ಮೂಲಕ ಮಾಡಿದ ಕ್ರಾಂತಿಯನ್ನು ಸ್ಮರಿಸಿದರು.
https://www.suddikanaja.com/2021/07/20/special-stone-for-basaveshwara-statue/
ಬಸವೇಶ್ವರರು ಸಮ ಸಮಾಜ ನಿರ್ಮಾಣಕ್ಕೆ ಒತ್ತು ನೀಡಿದರು. ಅನುಭವ ಮಂಟಪದಲ್ಲಿ ಎಲ್ಲರಿಗೂ ಅಭಿಯಪ್ರಾಯ ಮಂಡಿಸಲು ಅವಕಾಶ ನೀಡಲಾಗಿತ್ತು. ಆ ಅನುಭವ ಮಂಟಪವನ್ನು ಸಾಂವಿಧಾನಿಕವಾಗಿ ಸಂಸತ್ತು ಎಂದು ಬಣ್ಣಿಸಲಾಗುತ್ತಿದೆ. ಎಲ್ಲರನ್ನೂ ಒಂದೇ ಎಂದು ಭಾವಿಸಿದ್ದರು. ಸರಳ ಎಲ್ಲರಿಗೂ ಅರ್ಥವಾಗುವ ವಚನಗಳ ಮೂಲಕ ಸಾಮಾಜಿಕ ಕ್ರಾಂತಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.
ಬಸವೇಶ್ವರ ಪುತ್ಥಳಿ ನಡೆದುಬಂದ ದಾರಿ
- ಫ್ರಾನ್ಸಿನ ಕಂಪೆನಿಯೊಂದರಲ್ಲಿ ತಯಾರಿಸಲಾದ ಎರಡು ಬಸವೇಶ್ವರರ ಕಂಚಿನ ಪುತ್ಥಳಿ
- ಎರಡರಲ್ಲಿ ಒಂದನ್ನು ಲಂಡನ್ನಿನ ಲ್ಯಾಂಬೆತ್ ನಗರದ ಥೇಮ್ಸ್ ನದಿಯ ದಡದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.
- ಲ್ಯಾಂಬೆತ್ ನಗರದ ಮಾಜಿ ಮೇಯರ್ ನೀರಜ್ ಪಾಟೀಲ್ ಅವರ ಪ್ರಯತ್ನದಿಂದಾಗಿ 2018ರ ನವೆಂಬರ್ 22ರಂದು ಲಂಡನ್ ನಿಂದ ಶಿವಮೊಗ್ಗಕ್ಕೆ ಪುತ್ಥಳಿ ಹಸ್ತಾಂತರ
- ಶಿವಮೊಗ್ಗಕ್ಕೆ ಆಗಮಿಸಿದ್ದ ಬಸವೇಶ್ವರ ಪುತ್ಥಳಿಯನ್ನು ಬೆಕ್ಕಿನ ಕಲ್ಮಠದಲ್ಲಿಟ್ಟು ವಿಶೇಷ ಪೂಜೆ ಸಲ್ಲಿಸಿ ನಗರಕ್ಕೆ ಬರಮಾಡಿಕೊಳ್ಳಲಾಗಿತ್ತು.
- 2018ರ ಮಾರ್ಚ್ನಲ್ಲಿ ನಡೆದ ಶಿವಮೊಗ್ಗ ಮಹಾನಗರ ಪಾಲಿಕೆ ಆಯವ್ಯಯ ಬಜೆಟ್ ನಲ್ಲಿ 25 ಲಕ್ಷ ರೂಪಾಯಿ ಮೀಸಲು ಇರಿಸಲಾಗಿತ್ತು.
- ಪುತ್ಥಳಿ ಅನಾವರಣ ಸಂಬಂಧ ಕರ್ನಾಟಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ. ಆದರೆ, ಸರ್ವೋಚ್ಚ ನ್ಯಾಯಾಲಯ ನಿರ್ದೇಶನದಿಂದಾಗಿ ಅನಾವರಣಕ್ಕೆ ಬ್ರೇಕ್
- ಬಸವೇಶ್ವರ ಪುತ್ಥಳಿ ಅನಾವರಣಕ್ಕಾಗಿ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಕೋಲಾಹಲ. ಕಾರ್ಪೋರೇಟರ್ ಎಚ್.ಸಿ.ಯೋಗೇಶ್ ಅವರು ಬಸವೇಶ್ವರರ ಪೋಷಾಕಿನಲ್ಲಿ ಪ್ರತಿಭಟನೆ ಮಾಡಿದ್ದರ ಫಲವಾಗಿ ಗಮನ ಹರಿಸಿದ ಪಾಲಿಕೆ ಆಡಳಿತ. ಸರ್ಕಾರಕ್ಕೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಕೆ
- ಇತ್ತೀಚೆಗೆ ಶಿವಮೊಗ್ಗಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೀಡಿದ ಭರವಸೆಯಂಥೆ ಸಂಪುಟದಲ್ಲಿ ಗ್ರೀನ್ ಸಿಗ್ನಲ್
- 2021ರ ಜುಲೈ 24ರಂದು ಗಾಂಧಿ ಪಾರ್ಕ್ ಎದುರು ಪುತ್ಥಳಿ ಅನಾವರಣ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಬಸವೇಶ್ವರರ ತತ್ವಗಳು ಹಿಂದೂ ಧರ್ಮದ ಭಾಗವಾಗಿವೆ. ಬಸವಣ್ಣನವರ ಪುತ್ಥಳಿ ಶಿವಮೊಗ್ಗದಲ್ಲಿ ಪ್ರತಿಷ್ಠಾಪನೆ ಆಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಶರಣ ಪರಂಪರೆಯೇ ಇದೆ. ಇಲ್ಲಿ ಬಸವಣ್ಣನವರ ಪುತ್ಥಳಿ ಅನಾವರಣಗೊಳ್ಳುತ್ತಿರುವುದು ನಮ್ಮ ಸೌಭಾಗ್ಯ ಎಂದರು.
ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಮನುಕುಲದ ಉದ್ಧಾರಕ್ಕಾಗಿ ಅನುಭವ ಮಂಟಪದ ಮೂಲಕ ಒಂದು ಸಾಮಾಜಿಕ ನ್ಯಾಯ ನೀಡಿದ ಬಸವಣ್ಣನವರ ವಿಚಾರ ಧಾರೆಗಳು ಎಂದಿಗೂ ಪ್ರಸ್ತುತ ಎಂದರು.
ಕಾರ್ಯಕ್ರಮದಲ್ಲಿ ಬಸವಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ, ಡಾ. ಮಹಾಂತ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ, ಸ್ವಾಮಿ ವಿನಯಾನಂದ ಸರಸ್ವತಿ, ಅಭಿನವ ಚನ್ನಬಸವ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ನೀಲಕಂಠ ಸ್ವಾಮೀಜಿ, ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
https://www.suddikanaja.com/2021/07/16/basaveshwara-statue/
ಶಾಸಕರಾದ ಆರ್. ಪ್ರಸನ್ನಕುಮಾರ್, ಎಸ್. ರುದ್ರೇಗೌಡ, ಕೆ.ಬಿ. ಅಶೋಕ್ ನಾಯ್ಕ್, ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಪ್ರಮುಖರಾದ ಡಿ.ಎಸ್. ಅರುಣ್, ಎಸ್. ದತ್ತಾತ್ರಿ, ಮಾಜಿ ಮೇಯರ್ ಕೇಬಲ್ ಬಾಬು, ಪಾಲಿಕೆ ಸದಸ್ಯರಾದ ಯಮುನಾ ರಂಗೇಗೌಡ, ಎಚ್.ಸಿ. ಯೋಗೇಶ್, ಎಸ್.ಎನ್. ಚನ್ನಬಸಪ್ಪ, ಧೀರರಾಜ್ ಹೊನ್ನವಿಲೆ, ಅನಿತಾ ರವಿಶಂಕರ್, ಸುರೇಖಾ ಮುರಳೀಧರ್ ಹಾಗೂ ವೈ.ಹೆಚ್. ನಾಗರಾಜ್ ಉಪಸ್ಥಿತರಿದ್ದರು.
ಸನ್ಮಾನ | ಲಂಡನ್ ನಿಂದ ಬಸವಣ್ಣನವರ ಪ್ರತಿಮೆ ತರಲು ಶ್ರಮಿಸಿದ ಮಾಜಿ ಮೇಯರ್ ಏಳುಮಲೈ(ಕೇಬಲ್ ಬಾಬು) ಹಾಗೂ ಪಾಲಿಕೆ ಸದಸ್ಯ ಎಚ್.ಸಿ. ಯೋಗೇಶ್ ಅವರಿಗೆ ಸನ್ಮಾನಿಸಲಾಯಿತು. ಆಯುಕ್ತ ಚಿದಾನಂದ ವಟಾರೆ ಸ್ವಾಗತಿಸಿದರು.
https://www.suddikanaja.com/2021/07/21/malenadu-veerashaiva-mathadhishara-parishat-supported-bs-yadiyurappa/