ಸುದ್ದಿ ಕಣಜ.ಕಾಂ | DISTRICT | FLOOD
ಶಿವಮೊಗ್ಗ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ಪ್ರಮಾಣ ಸಮೀಕ್ಷೆ ನಡೆಸಲಾಗುತ್ತಿದ್ದು, ಪ್ರಾಥಮಿಕವಾಗಿ 418 ಕೋಟಿ ರೂಪಾಯಿ ಮೌಲ್ಯದ ಹಾನಿ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
https://www.suddikanaja.com/2021/07/25/due-to-heavy-rain-land-sliding-in-shivamogga-district/
ಅತಿವೃಷ್ಟಿಯಿಂದ ಹಾನಿಗೀಡಾಗಿರುವ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಹೋಬಳಿಯ ಪ್ರದೇಶಗಳಿಗೆ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಆರಗ ಜ್ಞಾನೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವದ್ವಯರು, ‘ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು. ಸರಕಾರದ ಮಾರ್ಗಸೂಚಿ ಹೊರತುಪಡಿಸಿ ಹೆಚ್ಚುವರಿ ಪರಿಹಾರ ಒದಗಿಸುವ ಕುರಿತು ಪ್ರಯತ್ನಿಸಲಾಗುವುದು’ ಎಂದರು.
ಅತಿವೃಷ್ಟಿ ಸಮೀಕ್ಷೆ ನಾಲ್ಕು ದಿನಗಳಲ್ಲಿ ಪೂರ್ಣ
ಅತಿವೃಷ್ಟಿ ನಷ್ಟ ಪರಿಹಾರ ಸಮೀಕ್ಷೆ ನಾಲ್ಕು ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ವರದಿ ಕೈ ಸೇರಿದ ಬಳಿಕ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಸಚಿವದ್ವಯರಿಂದ ಎಲ್ಲೆಲ್ಲಿ ಸಮೀಕ್ಷೆ?
ಸಚಿವರು ಗುಡ್ಡ ಕುಸಿತದಿಂದ ಹಾನಿಗೀಡಾದ ಕೂಡಿಗೆ ಮಜಿರೆಯ ಹೆಗ್ಗಾರು ಬೆಟ್ಟ, ಭಾರತಿಪುರ ಬಳಿಯ ಹೆದ್ದಾರಿ ಕುಸಿತ, ಎಡೆಹಳ್ಳಿ ಕೆರೆ ಬಳಿಯ ಗುಡ್ಡ ಕುಸಿತ ಸ್ಥಳ, ಯೋಗಿ ನರಸೀಪುರ ಬಳಿಯ ಹುಲಿಬೆಟ್ಟ ಗುಡ್ಡ ಕುಸಿತ ಹಾಗೂ ಗೇರುವಳ್ಳಿ ಬಳಿ ರಸ್ತೆ ಕುಸಿದ ಸ್ಥಳ ಪರಿಶೀಲನೆ ನಡೆಸಿದರು.
https://www.suddikanaja.com/2021/06/19/cm-vc-on-rain-preparation/
ಒಂದೇ ಮಳೆಗೆ ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ಗುಡ್ಡ ಕುಸಿತ
ಒಂದೇ ದಿನ ಸುರಿದ ಭಾರೀ ಮಳೆಗೆ ತಾಲೂಕಿನಲ್ಲಿ 10ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿದಿದೆ. ಹಲವು ಕೆರೆಗಳ ಕೋಡಿ ಹರಿದು ಕೃಷಿ ಜಮೀನುಗಳಿಗೆ ಹಾನಿ ಸಂಭವಿಸಿದೆ. ಗ್ರಾಮೀಣ ರಸ್ತೆಗಳು ಹಾನಿಗೀಡಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿ ಅಂದಾಜು ನಡೆಸುತ್ತಿದ್ದಾರೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.
ಮಳೆಯಿಂದಾದ ಹಾನಿಯ ಪ್ರಮಾಣವೆಷ್ಟು?
ಸಣ್ಣ ರೈತರ ಕೃಷಿ ಭೂಮಿ 4,609 ಹೆಕ್ಟೆರ್, ತೋಟಗಾರಿಕೆ ಭೂಮಿ 1,132 ಹೆಕ್ಟೆರ್, ಇತರೆ ರೈತರ ಕೃಷಿ ಭೂಮಿ 240 ಹೆಕ್ಟೆರ್, ಮೃತ ಪಟ್ಟ ಜಾನುವಾರುಗಳು 27, ಸಂಪೂರ್ಣ ಹಾನಿಯಾದ ಮನೆಗಳು ಕಚ್ಚಾ ಮತ್ತು ಪಕ್ಕಾ ಸೇರಿ 126, ಹೆಚ್ಚಿಗೆ ಹಾನಿಯಾಗಿರುವ ಮನೆಗಳು ಕಚ್ಛಾ ಮತ್ತು ಪಕ್ಕಾ ಸೇರಿ 478, ಭಾಗಶಃ ಹಾನಿ ಮನೆಗಳು 540, ರಾಜ್ಯ ಹೆದ್ದಾರಿ 56 ಕಿ.ಮೀ., ಜಿಲ್ಲಾ ಮುಖ್ಯ ರಸ್ತೆ 138 ಕಿ.ಮೀ., ಗ್ರಾಮೀಣ ರಸ್ತೆ 1243 ಕಿ.ಮೀ., ನಗರ ರಸ್ತೆಗಳು 168 ಕಿ.ಮೀ., ಸೇತುವೆಗಳು 196, ವಿದ್ಯುತ್ ಕಂಬಗಳು 2,033, ಅಂಗನವಾಡಿ ಕಟ್ಟಡಗಳು 309, ಪ್ರಾಥಮಿಕ ಶಾಲೆಗಳು 1000, ಕೆರೆಗಳು 326, ಮಾನವ ಹಾನಿ 4 ಸಂಭವಿಸಿವೆ. 10 ಕಾಳಜಿ ಕೇಂದ್ರಗಳಲ್ಲಿ 640 ಜನರಿಗೆ ಆಶ್ರಯ ಒದಗಿಸಲಾಗಿತ್ತು ಎಂದು ಕೆ.ಎಸ್. ಈಶ್ವರಪ್ಪ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ, ಎಸ್.ಪಿ ಬಿ.ಎಂ.ಲಕ್ಷ್ಮೀ ಪ್ರಸಾದ್ ಉಪಸ್ಥಿತರಿದ್ದರು.
https://www.suddikanaja.com/2021/05/02/cycle-yatra-to-ayodhya-rama-mandira/