ಸುದ್ದಿ ಕಣಜ.ಕಾಂ | KARNATAKA | TOURISM
ಕೊಡಗು: ಈ ಹೂವಿನ ವೈಶಿಷ್ಟ್ಯವೇ ಭಿನ್ನ. ಹನ್ನೆರಡು ವರ್ಷಗಳಿಗೊಮ್ಮೆ ಪಶ್ಚಿಮಘಟ್ಟದಲ್ಲಿ ಅರಳುವ ಈ ಹೂವು ವೀಕ್ಷಿಸಲು ಎರಡು ಕಣ್ಣು ಸಾಲವು. ಇಂತಹ ನಯನ ಮನೋಹರ ದೃಶ್ಯವೀಗ ಪ್ರವಾಸಿಗರ ಸ್ವರ್ಗ ಎಂದೇ ಖ್ಯಾತಿ ಪಡೆದಿರುವ ಕೊಡಗು ಜಿಲ್ಲೆಯ ಮಾಂದಲಪಟ್ಟಿ ಎಂಬಲ್ಲಿ ಕಾಣಬಹುದು.
ಕಳೆದ ಒಂದೆರಡು ವಾರಗಳಿಂದ ಇಲ್ಲಿ ನೀಲಕುರುಂಜಿ (ಸ್ಟ್ರೋಬಿಲಾಂಥೆಸ್ ಕುಂಠಿಯಾನ) ಹೂವು ಅರಳಿದ್ದು, ಈ ಅಪರೂಪದ ದೃಶ್ಯ ಸವಿಯುವುದಕ್ಕಾಗಿ ಪ್ರವಾಸಿಗರು ಇಲ್ಲಿಗೆ ದಾಂಗುಡಿ ಇಡುತಿದ್ದಾರೆ.
ಮಳೆ, ಗಾಳಿ, ನೀರು, ಬೆಳಕು ಸಮತೋಲನದಲ್ಲಿ ಇದ್ದಾಗ ಮಾತ್ರ ಈ ನೀಲ ಸುಂದರಿ ಅರಳುತ್ತಾಳೆ ಎನ್ನುತ್ತಾರೆ ಸ್ಥಳೀಯರು.
ಕಳೆದ ವರ್ಷ ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಯಲ್ಲಿ ನೀಲಕುರುಂಜಿ ಹೂವು ಅರಳಿತ್ತು. ಬೆಟ್ಟದುದ್ದಕ್ಕೂ ಹೂವುಗಳ ಸೌಂದರ್ಯ ಮನಸೂರೆಗೊಳ್ಳುವಂತಿತ್ತು. ಇದನ್ನು ವೀಕ್ಷಿಸುವುದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಈ ಹೂವಿನಲ್ಲಿ ಕರ್ನಾಟದಲ್ಲಿಯೇ 46ಕ್ಕೂ ಅಧಿಕ ಪ್ರಬೇಧಗಳಿವೆ. ನೀಲಸುಂದರಿಯು 1,300 ರಿಂದ 2,400 ಮೀಟರ್ ಎತ್ತರದಲ್ಲಿ ಬೆಳೆಯುವುದಲ್ಲದೇ ಇವುಗಳ ಎತ್ತರ ಇರುವುದು ಬರೀ 30-60 ಸೆಂ.ಮೀ.
ಈ ಕಾಡು ಮನುಷ್ಯರ ವಯಸ್ಸು ಲೆಕ್ಕ ಹಾಕಲು ಬಳಸಲಾಗುತ್ತೆ ಈ ಹೂವು
ಈ ಅಪರೂಪದ ಹೂವು ದಕ್ಷಿಣ ಭಾರತದ ನೀಲಗಿರಿ ಬೆಟ್ಟದಲ್ಲಿರುವ ಶೋಲಾ ಕಾಡಿನಲ್ಲಿ ಕಂಡುಬರುತ್ತದೆ. 19ನೇ ಶತಮಾನದಲ್ಲಿ ಕ್ರಿಶ್ಚಿಯನ್ ಗಾಟ್ ಫ್ರೈಡ್ ಡೇನಿಯಲ್ ನೀಸ್ ವಾನ್ ಎಸೆನ್ಬೆಕ್ ಎಂಬುವವರು ಹೂವನ್ನು ಮೊದಲು ಗುರುತಿಸಿದ್ದರು. ಇನ್ನೊಂದು ವಿಶೇಷವೆಂದರೆ, ಈ ಹೂವನ್ನು ಪಾಳ್ಯನ ಕಾಡಿನಲ್ಲಿ ವಾಸಿಸುತ್ತಿರುವವರು ಒಂದು ಹೂವಿನ ಸಹಾಯದಿಂದ ಜನರ ವಯಸ್ಸನ್ನು ಲೆಕ್ಕ ಹಾಕಲು ಬಳಸುತ್ತಾರೆ.
ಭೂ ಕುಸಿತ ಪತ್ತೆಗೆ ಬಳಕೆ
ಕುರುಂಜಿ ಹೂವನ್ನು ಬೆಟ್ಟದ ಯಾವ ಭಾಗದಲ್ಲಿ ಮಣ್ಣು ಕುಸಿದಿದೆ ಎಂದು ಗುರುತಿಸಲು ತಮಿಳುನಾಡಿನಲ್ಲಿ ಉಪಯೋಗಿಸಲಾಗುತ್ತದೆ.
ಗೋಣಿಚೀಲದ ಮಾದರಿಯಲ್ಲಿ ಈ ಹೂವು ಅನೇಕ ಬೀಜಗಳನ್ನು ತನ್ನ ಒಡಲಿನಲ್ಲಿ ಹುದುಗಿಟ್ಟುಕೊಂಡಿದೆ. ಮಾಗಿ ಹೂವು ಹಣ್ಣಾಗಿ ನಂತರ ಸಾಯುತ್ತದೆ. ಅದಕ್ಕೂ ಮುನ್ನ ಸಾವಿರಾರು ಬೀಜಗಳನ್ನು ಹೊರಬಿಟ್ಟು ಇನ್ನಷ್ಟು ಗಿಡಗಳ ಜನ್ಮಕ್ಕೆ ಕಾರಣವಾಗುತ್ತದೆ. ಆದರೆ ಪರಾಗ ಸ್ಪರ್ಶಕ್ಕೆ ಚಿಟ್ಟೆ, ಇರುವೆಯ ಬದಲಿಗೆ ದುಂಬಿಗಳನ್ನು ಆಕರ್ಷಿಸಬೇಕು. ಈ ನೀಲ ಸುಂದರಿ ಬೆಟ್ಟದಲ್ಲಿ ಆವರಿಸಿದರೆ ಆ ವರ್ಷ ಪ್ರಕೃತಿ ಸಮೃದ್ಧಿಯಿಂದ ತುಂಬಿದೆ ಎಂಬ ಶಕುನ ಎಂದೂ ನಂಬಲಾಗುತ್ತದೆ. ಕೊಡಗಿನಲ್ಲಿ ಈಗ ಇದರದ್ದೇ ಭರಾಟೆ ಆರಂಭವಾಗಿದೆ. ನೋಡ ಬನ್ನಿ ಒಮ್ಮೆ ಇದರ ಸೊಬಗು.
ಶಿವಮೊಗ್ಗದಲ್ಲಿ ಅನಾವರಣಗೊಳ್ಳಲಿರುವ ಬಸವೇಶ್ವರ ಪುತ್ಥಳಿ ಅಡಿ ವಿಶೇಷ ಕಲ್ಲು, ಹೇಗಿರಲಿದೆ ವಿನ್ಯಾಸ?