ಸುದ್ದಿ ಕಣಜ.ಕಾಂ | DISTRICT | HEALTH
ಶಿವಮೊಗ್ಗ: ಜಿಲ್ಲೆಯಾದ್ಯಂತ 15-18 ವರ್ಷದವರಿಗೆ ಕೋವ್ಯಾಕ್ಸಿನ್ ನೀಡಲಾಗುತ್ತಿದ್ದು, ಅಭಿಯಾನಕ್ಕೆ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೋಮವಾರ ಚಾಲನೆ ನೀಡಿದರು. ಸರ್ಕಾರಿ ಪಿಯು ಕಾಲೇಜು ದ್ವಿತೀಯ ಪಿಯುಸಿ ವಿದ್ಯಾರ್ಥಿ ಶಿಜಾದ್ ಖಾನ್ ಮೊದಲ ಲಸಿಕೆ ಪಡೆದರು.
ಈ ವೇಳೆ ಮಾತನಾಡಿದ ಕೆ.ಬಿ.ಶಿವಕುಮಾರ್, ಕೋವಿಡ್ ಮತ್ತು ಇದರ ರೂಪಾಂತರಿ ಸೋಂಕನ್ನು ನಿಯಂತ್ರಿಸಲು ಸರ್ಕಾರ ಇದೀಗ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕಾಕರಣ ಕಾರ್ಯಕ್ರಮ ಆರಂಭಿಸಿದೆ. ಮಕ್ಕಳು ಯಾವುದೇ ರೀತಿಯ ಗೊಂದಲ ಮತ್ತು ಭಯಕ್ಕೀಡಾಗದೇ ನಿರಾಂತಕವಾಗಿ ಲಸಿಕೆಯನ್ನು ಪಡೆಯಬೇಕೆಂದು ಸಲಹೆ ನೀಡಿದರು.
ಮಕ್ಕಳು ಸಮಾಜದ ವಿಭಿನ್ನ ವಯೋಮಿತಿಯ ಗುಂಪುಗಳೊಂದಿಗೆ ನಿತ್ಯ ಒಡನಾಡುತ್ತಾ, ಸಂಪರ್ಕದಲ್ಲಿರುತ್ತಾರೆ. ಆದಕಾರಣ ಮಕ್ಕಳಿಗೂ ಹಂತ ಹಂತವಾಗಿ ಕೋವಿಡ್ ಲಸಿಕೆ ಹಾಕುವ ಮೂಲಕ ಕೋವಿಡ್ ನಿಂದ ಮಕ್ಕಳನ್ನು ರಕ್ಷಿಸಲು ಸರ್ಕಾರ ಮೊದಲನೇ ಹಂತದಲ್ಲಿ 15 ರಿಂದ 18 ವಯೋಮಿತಿಯವರಿಗೆ 10 ದಿನಗಳ ಲಸಿಕಾ ಕಾರ್ಯಕ್ರಮ ಆಯೋಜಿಸಿದೆ ಎಂದು ಹೇಳಿದರು.
ಲಸಿಕೆ ಪಡೆಯಲು ಎರಡನೇ ಯೋಚನೆ ಬೇಡ
ಲಸಿಕೆ ಬಗ್ಗೆ ಮಕ್ಕಳಲ್ಲಿ ಎರಡನೇ ಯೋಚನೆಯೇ ಬೇಡ. ಲಸಿಕೆ ಸುರಕ್ಷಿತವಾಗಿದ್ದು ಯಾವುದೇ ರೀತಿಯಲ್ಲಿ ಆತಂಕ ಪಡುವುದು ಬೇಡ. ನಾವೆಲ್ಲ ಎರಡು ಡೋಸ್ ಲಸಿಕೆ ಪಡೆದು ಆರೋಗ್ಯವಾಗಿದ್ದೇವೆ. ಮೊದಲೆರಡು ಅಲೆಯಲ್ಲಿ ಜಿಲ್ಲೆಯಲ್ಲಿ ಸುಮಾರು 10 ಲಕ್ಷ ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ ಎಂದರು.
ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಮಾತನಾಡಿ, ಕೋವಿಡ್ ನಿಂದ ಹೊರಬರಲು ಪ್ರತಿಯೊಬ್ಬರು ಕಡ್ಡಾಯವಾಗಿ ಮಾರ್ಗಸೂಚಿಗಳನ್ನು ಪಾಲಿಸಬೇಕು. ಎರಡು ಡೋಸ್ ಲಸಿಕೆ ಪಡೆಯಬೇಕು ಎಂದರು.
ಡಿ.ಎಚ್.ಒ ಡಾ.ರಾಜೇಶ್ ಸುರಗಿಹಳ್ಳಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಿ.ವೈ.ಚಂದ್ರಶೇಖರ್ ಮಾತನಾಡಿದರು. ಆರ್.ಸಿಎಚ್.ಓ ಡಾ.ನಾಗರಾಜ್ ನಾಯ್ಕ್, ಡಿಡಿಪಿಯು ನಾಗರಾಜ್ ಕಾಗಲ್ ಕರ್, ಡಿಡಿಪಿಐ ರಮೇಶ್, ಟಿಎಚ್.ಓ ಡಾ.ಚಂದ್ರಶೇಖರ್ ಇದ್ದರು. ಉಪನ್ಯಾಸಕ ಎಸ್.ಯೋಗೇಶ್ ಸ್ವಾಗತಿಸಿದರು. ಪ್ರತಿಮಾ ನಿರೂಪಿಸಿದರು.