ಸುದ್ದಿ ಕಣಜ.ಕಾಂ | KARNATAKA | PRESIDENT AWARD
ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ ವಂಚಕರನ್ನು ಪತ್ತೆ ಹಚ್ಚಿ, ವಂಚಿಸಿದ ತೆರಿಗೆಯನ್ನು ವಸೂಲಿ ಮಾಡುವಲ್ಲಿ ಮಹತ್ವದ ಸಾಧನೆ ತೋರಿದ ಕನ್ನಡಿಗ ಅಧಿಕಾರಿ ಮಹೇಶ್ ಕುಮಾರ್ ಅವರಿಗೆ 2021ನೇ ಸಾಲಿನ ರಾಷ್ಟ್ರಪತಿ ಪುರಸ್ಕಾರ ದೊರೆತಿದೆ.
ಬೆಂಗಳೂರು ದಕ್ಷಿಣ ಕೇಂದ್ರೀಯ ತೆರಿಗೆ ಕಮಿಷನರೇಟ್ ನ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ವಿಭಾಗದ ಅಧೀಕ್ಷಕ ಮಹೇಶ್ ಕುಮಾರ್ ಅವರಿಗೆ ಬೆಂಗಳೂರಿನಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
READ | ಮಹಿಳೆಯರಿಗೆ ಭಿನ್ನವಾಗಿ ಗೌರವ ಸೂಚಿಸಿದ ಗೂಗಲ್, ವೈರಲ್ ಆಯ್ತು ಎನಿಮೇಷನ್, ಏನಿದರ ವಿಶೇಷ?
ಮಹೇಶ್ ಕುಮಾರ್ ಅವರು 1,380 ಕೋಟಿ ರೂಪಾಯಿ ತೆರಿಗೆ ವಂಚನೆಯ 153 ಪ್ರಕರಣಗಳಲ್ಲಿ 482 ಕೋಟಿ ರೂಪಾಯಿ ವಸೂಲು ಮಾಡಿದ ಸಾಧನೆಗಾಗಿ ಈ ಪುರಸ್ಕಾರ ಲಭಿಸಿದೆ.
ಪ್ರಶಸ್ತಿ ಪುರಸ್ಕೃತ ಮಹೇಶ್ ಕುಮಾರ್ ಹೇಳಿದ್ದೇನು?
`ತೆರಿಗೆ ವಂಚಕರನ್ನು ಪತ್ತೆ ಹಚ್ಚಿ, ವಂಚಿಸಿದ ತೆರಿಗೆಯನ್ನು ದೇಶಕ್ಕೆ ಕೊಡಿಸುವ ಕೆಲಸ ನಿಜವಾದ ದೇಶ ಸೇವೆಗಳಲ್ಲಿ ಒಂದು ಎಂದು ಭಾವಿಸಿದ್ದೇನೆ. ಯಾರ ಹಸ್ತಕ್ಷೇಪವೂ ಇಲ್ಲದೆ, ಯಾರ ಮುಲಾಜಿಗೂ ಒಳಗಾಗದೆ ಕರ್ತವ್ಯ ನಿರ್ವಹಿಸಲು ಅವಕಾಶ ಇರುವುದು ಹೆಮ್ಮೆಯ ಸಂಗತಿ. ಹೀಗಾಗಿಯೇ ಇಂತಹ ಸಾಧನೆ ಮಾಡುವುದು ಸಾಧ್ಯವಾಯಿತು’ ಎಂದು ಮಹೇಶ್ ಕುಮಾರ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.