ಸುದ್ದಿ ಕಣಜ.ಕಾಂ | DISTRICT | WORKSHOP
ಶಿವಮೊಗ್ಗ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹಾಲು, ಮಾಂಸದಲ್ಲಿ ಶೇ.5 ಮತ್ತು ಮೊಟ್ಟೆ ಉತ್ಪನ್ನದಲ್ಲಿ ಶೇ.10.19ರಷ್ಟು ಹೆಚ್ಚಳವಾಗಿದೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಡಾ.ಎಂ.ಕೆ.ನಾಯಕ್ ಹೇಳಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಐಸಿಎಆರ್, ಕೃಷಿ ವಿಜ್ಞಾನ ಕೇಂದ್ರ, ನವುಲೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ ನವುಲೆಯ ಕೃಷಿ ಮಹಾವಿದ್ಯಾಲಯದಲ್ಲಿ ಪಶುಪಾಲನಾ ಇಲಾಖೆಯ ಪಶುವೈದ್ಯಾಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ‘ಜಾನುವಾರುಗಳಲ್ಲಿನ ಪ್ರಚಲಿತ ಸಮಸ್ಯೆಗಳು’ ಕುರಿತಾದ ಒಂದು ದಿನದ ತಾಂತ್ರಿಕ ಕಾರ್ಯಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
READ | ಸಹ್ಯಾದ್ರಿ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಹೊಟ್ಟೆನೋವು, ವಾಂತಿ, ಆಸ್ಪತ್ರೆಗೆ ದಾಖಲು
ಭಾರತದಿಂದ ವಿಶ್ವಕ್ಕೆ ಶೇ.22ರಷ್ಟು ಹಾಲು ಕೊಡುಗೆ
ಇಡೀ ವಿಶ್ವದಲ್ಲಿ ಆಹಾರ ಭದ್ರತೆ ಖಾತ್ರಿಪಡಿಸಿರುವ ಏಕೈಕ ರಾಷ್ಟ್ರ ನಮ್ಮದು. ಡಾ.ವರ್ಗೀಸ್ ಕುರಿಯನ್ ಅವರ ಬಿಳಿ ಕ್ರಾಂತಿಯ ಪರಿಣಾಮವಾಗಿ ಇಡೀ ವಿಶ್ವದ ಹಾಲಿನ ಪ್ರಮಾಣದಲ್ಲಿ ಶೇ.22 ಕೊಡುಗೆ ನಮ್ಮ ದೇಶದ್ದಾಗಿದೆ. ಪ್ರತಿ ದಿನ 200 ಮಿಲಿಯನ್ ಲೀಟರ್ ಹಾಲಿನ ಉತ್ಪನ್ನವಿದೆ. ನಮ್ಮ ದೇಶದಲ್ಲಿ ಪ್ರತಿ ಒಬ್ಬರಿಗೆ 280 ಗ್ರಾಂ ಹಾಲಿನ ಅವಶ್ಯಕತೆ ಇದೆ. ಆದರೆ ನಮ್ಮ ಉತ್ಪನ್ನದ ಪ್ರಕಾರ ತಲಾ 480 ಗ್ರಾಂ ಲಭ್ಯವಿದೆ. (ಜಾಗತಿಕವಾಗಿ) ತತ್ತಿ ಶೇ.7.2 ಮತ್ತು ಮಾಂಸ ಶೇ. 2.5 ಉತ್ಪಾದನೆ ಇದ್ದು ಲೈವ್ ಸ್ಟಾಕ್(ಜಾನುವಾರು)ನಲ್ಲಿ ದೇಶ ಮೊದಲನೇ ಸ್ಥಾನದಲ್ಲಿದೆ ಎಂದರು.
ಡಿಸಿ ಡಾ.ಆರ್.ಸೆಲ್ವಮಣಿ ಹೇಳಿದ್ದೇನು?
ಎಲ್ಲ ಕ್ಷೇತ್ರಗಳಲ್ಲಿ ನಿರಂತರವಾಗಿ ಹೊಸ ಸಂಶೋಧನೆಗಳು ಮತ್ತು ಬೆಳವಣಿಗೆಗಳು ಆಗುತ್ತಿದ್ದು ಇಂತಹ ತಾಂತ್ರಿಕ ಕಾರ್ಯಾಗಾರದ ಮೂಲಕ ಅವುಗಳ ಬಗ್ಗೆ ತಿಳಿದು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಿತ್ತದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ವಿವಿಧ ವಿಷಯ, ಚರ್ಚೆ, ವಿನಿಮಯ ಮಾಡಿಕೊಂಡು, ಅಪ್ ಡೇಟ್ ಆಗಬಹುದು. ಆದ್ದರಿಂದ ಪ್ರತಿ ತಿಂಗಳಿಗೆ ಒಂದು ಸೆಮಿನಾರ್ ಏರ್ಪಡಿಸುವುದು ಒಳ್ಳೆಯದು ಎಂದು ಸಲಹೆ ನೀಡಿದರು.
READ | ಸಕ್ಸಸ್ ಸ್ಟೋರಿ, ಉದ್ಯೋಗ ಕಸಿದುಕೊಂಡ ಲಾಕ್ಡೌನ್, ಬದುಕು ನೀಡಿದ ‘ಕುರಿ ಸಾಕಾಣಿಕೆ’
ಕಾರ್ಯಕ್ರಮದಲ್ಲಿ ಕೃಷಿ ಮಹಾವಿದ್ಯಾಲಯದ ಡೀನ್(ಕೃಷಿ) ಡಾ.ಸಿ.ಆರ್.ಜಗದೀಶ್, ಸಹ ವಿಸ್ತರಣಾ ನಿರ್ದೇಶಕ ಡಾ.ಎಸ್.ಯು. ಪಾಟೀಲ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಮತ್ತು ಹಿರಿಯ ವಿಜ್ಞಾನಿಗಳಾದ ಡಾ.ಬಿ.ಸಿ.ಹನುಂತಸ್ವಾಮಿ ಪಾಲ್ಗೊಂಡಿದ್ದರು. ವಿಜ್ಞಾನಿ(ಪಶು ವಿಜ್ಞಾನ) ಡಾ.ಎಂ.ಅಶೋಕ್, ಪಶು ವೈದ್ಯಾಧಿಕಾರಿ ಡಾ.ನಿಖಿತ್ ಎಂ.ಎಸ್, ಹಿರಿಯ ಪಶು ವೈದ್ಯಾಧಿಕಾರಿ ಡಾ.ಎಸ್.ಪಿ. ಮಂಜುನಾಥ್, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಎಚ್.ವಿ.ದಯಾನಂದ್ ಅವರು ಜಾನುವಾರುಗಳಲ್ಲಿ ಕಂಡು ಬರುವ ವಿವಿಧ ರೋಗಗಳ ಕುರಿತು ಮಾತನಾಡಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಶಿವಯೋಗಿ ಬಿ.ಯಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಗರವಳ್ಳಿಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಕೆ.ಮುರಳೀಧರ್ ನಿರೂಪಿಸಿದರು. ಕೆವಿಕೆ ವಿಜ್ಞಾನಿ, ತರಬೇತಿ ಸಂಘಟಕ ಡಾ.ಎಂ.ಅಶೋಕ್ ವಂದಿಸಿದರು.
https://www.suddikanaja.com/2021/09/20/animal-husbandry-department/