ಸುದ್ದಿ ಕಣಜ.ಕಾಂ | DISTRICT | DC MEETING
ಶಿವಮೊಗ್ಗ: ಲೋಕಾಯುಕ್ತ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೊರಬ ತಾಲ್ಲೂಕು ತಾಳಗುಪ್ಪ ಗ್ರಾಮದ ಸರ್ವೇ ನಂ. 93ರಲ್ಲಿ 12 ಅರ್ಜಿದಾರರು ಹಾಗೂ ಕಾಟೂರು ಗ್ರಾಮದ ಸರ್ವೇ ನಂ. 19 ರಲ್ಲಿ 70 ಅರ್ಜಿದಾರರ ಅರ್ಜಿಗಳನ್ನು ವಿಲೇವಾರಿ ಮಾಡುವಲ್ಲಿನ ವಿಳಂಬದ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸುದ್ದ ಜಿಲ್ಲಾಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾತನಾಡಿದರು.
READ | ಅರಣ್ಯ ಹಕ್ಕು ಕಾಯ್ದೆ ಬಗ್ಗೆ ನಡೀತು ಪ್ರಮುಖ ಸಭೆ, ಡಿಸಿ ನೀಡಿದ ಖಡಕ್ ವಾರ್ನಿಂಗ್ಗಳೇನು?
ಉಪ ವಿಭಾಗಾಧಿಕಾರಿಗಳು ತಮ್ಮ ಹಂತದಲ್ಲಿ ಸಭೆ ಕರೆದು ಅರಣ್ಯ ಭೂಮಿ ಗುರುತಿಸುವ ಬಗ್ಗೆ ಕ್ರಮ ಜರುಗಿಸಬೇಕು. ಅರಣ್ಯ ಭೂಮಿ ಗುರುತಿಸಿ, ಅಧಿಸೂಚನೆಯ ನಕಲು ಪ್ರತಿಗಳ ಪ್ರತಿ ಪುಟವನ್ನು ದೃಢೀಕರಿಸಿ ತಹಸೀಲ್ದಾರರಿಗೆ ಕಳುಹಿಸಬೇಕು. ಮ್ಯುಟೇಷನ್ ಆರಂಭಿಸಬೇಕು. ಈ ಕುರಿತು ಮುಂದಿನ ಸಭೆಯಲ್ಲಿ ಪರಿಶೀಲಿಸುತ್ತೇನೆ ಎಂದು ಹೇಳಿದರು.
ಸಮಿತಿಯಲ್ಲಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳಿ, ಎಚ್ಚರಿಕೆ
ಲೋಕಾಯುಕ್ತ ನ್ಯಾಯಾಲಯದಲ್ಲಿ ದಾಖಲಾಗಿರುವ ಅರಣ್ಯ ಹಕ್ಕು ಕಾಯ್ದೆ (Forest Right Act)ಯ ಮೂಲ ಕಡತಗಳನ್ನು ಉಪ ವಿಭಾಗ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕು. ಮುಂದಿನ ಸಭೆಯೊಳಗೆ ಕ್ರಮ ವಹಿಸದಿದ್ದರೆ ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ರಾಮ ಅರಣ್ಯ ಹಕ್ಕು ಸಮಿತಿಯಿಂದ ತ್ವರಿತವಾಗಿ ಕಡತಗಳನ್ನು ಉಪ ವಿಭಾಗ ಮಟ್ಟದ ಸಮಿತಿಗೆ ವಾಪಸ್ ಕಳುಹಿಸಲು ಕ್ರಮ ವಹಿಸುವ ಬಗ್ಗೆ ಪಿಡಿಓ ಮತ್ತು ಇಓಗಳಿಗೆ ಜಿ.ಪಂ ಸಿಇಓ ಇವರು ನಿರ್ದೇಶನ ನೀಡುವಂತೆ ಕೋರಿದರು.
ಅಕ್ರಮ ಅರಣ್ಯ ಅನುಮತಿಯ(ಇಲ್ಲೀಗಲ್ ಗ್ರಾಂಟ್ ಆಫ್ ಫಾರೆಸ್ಟ್) ಬಗ್ಗೆ ಡಿಎಫ್.ಓ ಅವರು ಓರ್ವ ಆರ್.ಎಫ್.ಓ ಕೇಡರ್ ಅಧಿಕಾರಿಯನ್ನು ನಿಯೋಜಿಸಿ ವಿವರವಾದ ಟಿಪ್ಪಣಿಯೊಂದಿಗೆ ಪ್ರಕರಣ ಸಿದ್ದಪಡಿಸಿ ಪ್ರತಿ ಪುಟವನ್ನು ದೃಢೀಕರಿಸಿ ವ್ಯಾಪ್ತಿಯನುಸಾರ ಎಸಿ ಅಥವಾ ಡಿಸಿ ಅವರಿಗೆ ಮೇಲ್ಮನವಿ ಸಲ್ಲಿಸಬೇಕು. ಹೀಗೆ ತಾಲ್ಲೂಕುವಾರು ಮೇಲ್ಮನವಿ ಸಿದ್ದಪಡಿಸುವಂತೆ ಸೂಚನೆ ನೀಡಿದರು.
READ | ಶಿವಮೊಗ್ಗದ ಇಂದಿನ ಪ್ರಮುಖ ಸುದ್ದಿಗಳು
ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ವಿತರಿಸಿದ ಫಲಾನುಭವಿಗಳ ವಿವರಗಳನ್ನು ಆಯಾ ತಹಸೀಲ್ದಾರರು ಕಂದಾಯ ಇಲಾಖೆಯ ಪಹಣಿ ಕಾಲಂ.11 ರಲ್ಲಿ ದಾಖಲಿಸಬೇಕು ಹಾಗೂ ಹಕ್ಕುಪತ್ರ ವಿತರಿಸಿದ ಫಲಾನುಭವಿಗಳ ವಿವರವನ್ನು ತಾಲ್ಲೂಕುವಾರು ಫ್ರುಟ್ಸ್ ( FRUITS ) ತಂತ್ರಾಂಶದಲ್ಲಿ ನೋಂದಣಿ ಮಾಡಬೇಕೆಂದರು.
ಜಿಲ್ಲಾ ಅರಣ್ಯ ಹಕ್ಕು ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೆ.ಅಜ್ಜಪ್ಪ ಸಭೆಗೆ ಸಮಿತಿಯ ಪ್ರಗತಿ ಮಾಹಿತಿ ನೀಡಿದರು. ಸಾಗರ ಉಪವಿಭಾಗಾಧಿಕಾರಿ ನಾಗರಾಜ್, ಡಿಎಫ್ಓ ಗಳು, ತಹಸಿಲ್ದಾರ್, ಇಓ, ತಾಲ್ಲೂಕುಗಳ ಸಮಾಜ ಕಲ್ಯಾಣ ಅಧಿಕಾರಿಗಳು ಹಾಜರಿದ್ದರು.