ಸುದ್ದಿ ಕಣಜ.ಕಾಂ | DISTRICT | PROTEST
ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರು ತಮ್ಮ ಬೇಡಿಕೆಗಳನ್ನು ಈಡೇರಿಸಲು 15 ದಿನಗಳ ಗಡುವು ನೀಡಿದ್ದಾರೆ. ಒಂದುವೇಳೆ, ಇದರೊಳಗೆ ನಿರಾಶ್ರಿತರಿಗೆ ಭೂಮಿಯನ್ನು ಹಂಚಿಕೆ ಮಾಡದಿದ್ದರೆ, ಶರಾವತಿ ಮಹಾ ವಿದ್ಯುದಾಗರಕ್ಕೆ ಮುತ್ತಿಗೆ ಹಾಕಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
READ | ವಾಹನ ಮಾಲೀಕರಿಗೆ ಶಾಕ್, ಶಿವಮೊಗ್ಗದಲ್ಲಿ ಪೆಟ್ರೋಲ್, ಡಿಸೇಲ್ ಮತ್ತಷ್ಟು ದುಬಾರಿ, ಇಂದಿನ ದರ ಇಲ್ಲಿದೆ
ಶಿವಮೊಗ್ಗ ಜಿಲ್ಲಾ ಶರಾವತಿ ಹಿನ್ನೀರು ಮುಳುಗಡೆ ರೈತರ ಸಂಘದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹೊರಟು ಹೋರಾಟಗಾರರು ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ವಿವಿಧ ಬೇಡಿಕೆಗಳ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಿದ್ದಾರೆ.
ಸಿಗಂಧೂರು ಶ್ರೀ ಚೌಡೇಶ್ವರಿ ದೇವಾಲಯ ಧರ್ಮದರ್ಶಿ ರಾಮಪ್ಪ ಮಾತನಾಡಿ, ಶರಾವತಿ ಹಿನ್ನೀರಿನ ಮುಳುಗಡೆ ರೈತರು ಭೂಮಿಗಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. 166 ಹಳ್ಳಿಗಳು ಮುಳುಗಡೆಯಾಗಿವೆ. 60 ವರ್ಷಗಳಿಂದ ಮುಳುಗಡೆ ಸಂತ್ರಸ್ತರಿಗೆ ಜಮೀನು ಹಂಚಿಕೆಯಾಗಿಲ್ಲ. ಸರ್ಕಾರ ತಕ್ಷಣವೇ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಶರಾವತಿ ಹಿನ್ನೀರಿನ ಮುಳುಗಡೆ ರೈತರೆಲ್ಲರೂ ತಮಗೆ ಭೂಮಿ ಸಿಗುವವರೆಗೂ ಹೋರಾಟವನ್ನು ತೀವ್ರಗೊಳಿಸಬೇಕು. ರಾಜ್ಯಕ್ಕೆ ಮತ್ತು ದೇಶಕ್ಕೆ ಬೆಳಕು ನೀಡಿದ ಶರಾವತಿ ಹಿನ್ನೀರಿನ ಮುಳುಗಡೆ ರೈತರು ಕತ್ತಲಲ್ಲಿಯೇ ಇದ್ದಾರೆ. ನೂರಾರು ಕುಟುಂಬಗಳು ನಿರಾಶ್ರಿತವಾಗಿವೆ. ಇದುವರೆಗೂ ಸರ್ಕಾರ ಯಾವುದೇ ಭೂಮಿಯ ಹಕ್ಕನ್ನು ನೀಡಿಲ್ಲ. ಹಾಗಾಗಿ ಹೋರಾಟ ಅನಿವಾರ್ಯವಾಗಿದೆ.
– ಶ್ರೀ ರೇಣುಕಾನಂದಸ್ವಾಮೀಜಿ, ಶ್ರೀ ನಾರಾಯಣ ಗುರು ಸಂಸ್ಥಾನ, ನಿಟ್ಟೂರು
ಬೇಡಿಕೆಗಳೇನು?
- ಶರಾವತಿ ಮುಳುಗಡೆ ಸಂತ್ರಸ್ತರ ಅಭಿವೃದ್ಧಿ ಪ್ರಾಧಿಕಾರ ರಚನೆ.
- 1959 ರ ನಿರ್ಣಯಗಳನ್ನು ಅನುಷ್ಠಾನಗೊಳಿಸಬೇಕು.
- ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮೀಸಲಿಟ್ಟ ಭೂಮಿಯನ್ನು ಇಂಡೀಕರಣದ ಹೆಸರಿನಲ್ಲಿ ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದ್ದು, ಅದನ್ನು ಕೈಬಿಡಬೇಕು.
- 1961 ಮತ್ತು 2018 ರಲ್ಲಿ ಡಿ ನೋಟಿಫಿಕೇಶನ್ ಮಾಡಿರುವ ಜಾಗವನ್ನು ಶೀಘ್ರದಲ್ಲಿ ಭೂಮಿ ಹಂಚಿಕೆಯನ್ನು ಮಾಡಿ ಹಕ್ಕುಪತ್ರವನ್ನು ನೀಡಬೇಕು.
- ಮುಳುಗಡೆ ಸಂತ್ರಸ್ತರಿಗೆ ನೀಡಿರುವ ಖಾತೆ ಜಮೀನಿಗೆ ಪೋಡಿ ದುರಸ್ತಿ ಮಾಡಿಕೊಡಬೇಕು.
- ತಪ್ಪು ಮಾಹಿತಿ ನೀಡಿದ ತಪ್ಪಿತಸ್ತ ಅಧಿಕಾರಿಗಳನ್ನು ವಜಾಗೊಳಿಸಬೇಕು.
- ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮೀಸಲಿಟ್ಟ ಭೂಮಿಯನ್ನು, ಅಕ್ರಮವಾಗಿ ಅತಿಕ್ರಮಿಸಿರುವ ಭೂ ಕಬಳಿಕೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
- 15 ದಿನಗಳ ಒಳಗಾಗಿ ನಿರಾಶ್ರಿತರಿಗೆ ಭೂಮಿಯನ್ನು ಹಂಚಿಕೆ ಮಾಡದಿದ್ದರೆ, ಶರಾವತಿ ಮಹಾ ವಿದ್ಯುದಾಗರಕ್ಕೆ ಮುತ್ತಿಗೆ ಹಾಕಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು.
READ | ಆಯನೂರು ಸುತ್ತಮುತ್ತ ಭಾರೀ ಆಲಿಕಲ್ಲು ಮಳೆ, ಹೆಂಚು, ಸೋಲಾರ್ ಪ್ಯಾನಲ್ ಜಖಂ
ಪ್ರತಿಭಟನೆಯಲ್ಲಿ ತೀ.ನಾ.ಶ್ರೀನಿವಾಸ್, ಮುಳುಗಡೆ ರೈತರಾದ ಹೂವಪ್ಪ, ಗಣಪತಿ, ಕೆ.ಎನ್.ಅಶೋಕ್, ಕೇಶವ್À, ರಾಜೇಂದ್ರ, ರಘುಪತಿ, ಶಿವಾನಂದ್, ಮಂಜಪ್ಪ ಸಂಕಲಪುರ, ಎಂ.ಡಿ.ನಾಗರಾಜ್, ಕೆ.ಸುರೇಶ್, ಎಸ್, ರಾಘವೇಂದ್ರ, ಗೋವಿಂದಪ್ಪ ಪಾಲ್ಗೊಂಡಿದ್ದರು.