ಸುದ್ದಿ ಕಣಜ.ಕಾಂ | DISTRICT | CULTURAL PROGRAM
ಶಿವಮೊಗ್ಗ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸ್ಫೂರ್ತಿದಾಯಿನಿ, ಪ್ರಗತಿಗಾಮಿನಿ, ನಾ ಹೆಣ್ಣೆಂಬುದೇ ಹೆಮ್ಮೆ.. ಎಂಬ ಶಿರೋನಾಮೆಯಡಿ ಏಪ್ರಿಲ್ 5ರಂದು ಬೆಳಗ್ಗೆ 10.30ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಮಹಿಳಾ ದಿನಾಚರಣೆಯನ್ನು ಏರ್ಪಡಿಸಿದೆ.
ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸರಿಗಮಪ ಖ್ಯಾತಿಯ ಶ್ರೀಹರ್ಷ, ಶರಧಿ ಪಾಟೀಲ್ ಹಾಗೂ ವರ್ಣ ಚವ್ಹಾಣ್ ಆಗಮಿಸಿ, ಸಂಗೀತ ಸುಧೆ ಹರಿಸಲಿದ್ದಾರೆ.
ಕೇಶವಮೂರ್ತಿ ಅವರಿಂದ ಉದ್ಘಾಟನೆ
ಕಾರ್ಯಕ್ರಮವನ್ನು ಮತ್ತೂರಿನ ಖ್ಯಾತ ಗಮಕವಾಚಕ ಪದ್ಮಶ್ರೀ ಪುರಸ್ಕೃತ ವಿದ್ವಾನ್ ಚ್.ಆರ್.ಕೇಶವಮೂರ್ತಿ ಅವರು ಉದ್ಘಾಟಿಸಲಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು. ಹಾಸ್ಯ ಭಾಷಣಕಾರ್ತಿ ಹಾಗೂ ಸಾಹಿತಿ ಇಂದುಮತಿ ಸಾಲಿಮಠ ವಿಶೇಷ ಉಪನ್ಯಾಸ ನೀಡುವರು.
ಸದ್ಭಾವನಿ ಸಾಂಸ್ಕೃತಿಕ ಸಂಜೆ
ಅಂದು ಸಂಜೆ 5.30ರಿಂದ ಸದ್ಭಾವನಿ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಡಾ.ಶ್ರೀಪತಿ ಹಳಗುಂದ ಅವರು ರಚಿಸಿರುವ ಗಣೇಶ್ ಕೆಂಚನಾಲ ಅವರು ನಿರ್ದೇಶಿಸಿರುವ `ಮಾತೆ ಮಂಡೋದರಿ’ ಎಂಬ ಮಹಿಳಾ ಪ್ರಧಾನ ಮಾತೆ ಮಂಡೋದರಿ ಎಂಬ ಕಿರುನಾಟಕವನ್ನು ಮಲೆನಾಡು ಕಲಾತಂಡದ ಕಲಾವಿದರು ಅಭಿನಯಿಸುವರು.