ಸುದ್ದಿ ಕಣಜ.ಕಾಂ | KARANATAKA | POLITICAL NEWS
ಶಿವಮೊಗ್ಗ: ‘ಅಳಬೇಡಿ, ನಗುತ್ತಲೇ ನನಗೆ ಕಳುಹಿಸಿ… ಅಳುತ್ತಾ ಕಳುಹಿದ್ದರೆ ನಾನು ಹೋಗುವುದಿಲ್ಲ’ ಹೀಗೆಂದು ಹೇಳುವ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಿದ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಅವರು ಬೆಂಗಳೂರಿಗೆ ತೆರಳಲು ಅಣಿಯಾಗಿದ್ದಾರೆ.
ಬೆಂಗಳೂರಿಗೆ ಹೋಗುವ ಮುನ್ನ ಪಕ್ಷದ ಕಾರ್ಯಕರ್ತರು, ಮುಖಂಡರೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, ಅಗ್ನಿಪರೀಕ್ಷೆಯಲ್ಲಿ ಸಿಲುಕುತ್ತೇನೆ ಎಂದುಕೊಂಡಿರಲಿಲ್ಲ. ಇದರಲ್ಲೂ ಖಂಡಿತ ಯಶಸ್ವಿಯಾಗಿ ಹೊರಗೆ ಬರುತ್ತೇನೆ. ಜೀವ ಇರುವವರೆಗೆ ಪಕ್ಷ ಮತ್ತು ದೇಶದ ಸಂಘಟನೆಗಾಗಿ ದುಡಿಯುತ್ತೇನೆ. ಇನ್ನಷ್ಟು ಸೇವೆ ಹೆಚ್ಚು ಮಾಡಲು ಈ ಘಟನೆ ನನಗೆ ಅವಕಾಶ ಮಾಡಿಕೊಟ್ಟಿದೆ ಎಂದು ಭಾವಿಸುವೆ ಎಂದು ಹೇಳಿದರು.
ಸಂಘಟನೆ ಸೇರಿದ್ದು ಯಾರ ಪುಣ್ಯವೋ ಗೊತ್ತಿಲ್ಲ
ಸಂಘಟನೆಯಲ್ಲಿ ಬಂದು ಸೇರಿಕೊಂಡಿದ್ದು ಯಾರ ಪುಣ್ಯವೋ ಗೊತ್ತಿಲ್ಲ. ನಾನು ಮಾಡಿದ್ದೋ ಅಥವಾ ನಮ್ಮ ತಂದೆ ತಾಯಿ ಮಾಡಿದ ಪುಣ್ಯವೋ ಗೊತ್ತಿಲ್ಲ. ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಹಿತೈಷಿಗಳು ಕರೆ ಮಾಡುತ್ತಿದ್ದಾರೆ. ದೇವರ ಮೇಲೆ ನಂಬಿಕೆ ಇಡಿ ನಿಮಗೆ ಶುಭ ವಾಗಲಿದೆ ಎಂದು ಹೇಳಿದ್ದಾರೆ. ಇಷ್ಟೊಂದು ಜನ ಬೆಂಬಲ ನೋಡಿದ ಬಳಿಕ ನನ್ನಲ್ಲಿ ಆತ್ಮಸ್ಥೈರ್ಯ ಜಾಸ್ತಿಯಾಗಿದೆ’ ಎಂದು ತಿಳಿಸಿದರು.
ಹಿಂದೂಗಳ ಮೇಲಿನ ದೌರ್ಜನ್ಯ ತಡೆಯೋಣ
ದೇಶದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಡೆಯೋಣ. ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವವರಿಗೆ ಪಾಠ ಕಲಿಸೋಣ. ಇಂದು ಸಂಜೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಭೇಟಿ ಮಾಡಿ ರಾಜೀನಾಮೆ ನೀಡಲಿದ್ದೇನೆ. ಎಲ್ಲ ಆರೋಪಗಳಿಂದ ಮುಕ್ತನಾಗುವ ಭರವಸೆ ನನಗಿದೆ ಎಂದು ಹೇಳಿದರು.