ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಅಪರಿಚಿತ ವೃದ್ಧ ದಂಪತಿಯನ್ನು ರಕ್ಷಿಸುವುದಕ್ಕಾಗಿ ಹೊಳೆಹೊನ್ನೂರು ಸಮೀಪದ ಹಂಚಿನ ಸಿದ್ದಾಪುರ ಗ್ರಾಮದ ಭದ್ರಾ ನಾಲೆಗೆ ಹಾರಿದ್ದ ಯುವಕನ ಶವವು ಗುರುವಾರ ಚನ್ನಗಿರಿ ತಾಲೂಕಿನ ಹಿರೆಮಳಲಿ ಗ್ರಾಮದಲ್ಲಿ ಪತ್ತೆಯಾಗಿದೆ.
ರಿಪ್ಪನಪೇಟೆ ನೆಹರೂ ಬಡಾವಣೆ ನಿವಾಸಿ ಅನೀದ್ (22) ಮೃತರು. ಚನ್ನಗಿರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಅವರ ಮರಣೋತ್ತರ ಪರೀಕ್ಷೆ ನಡೆದಿದ್ದು, ಅಂತ್ಯಕ್ರಿಯೆಯು ಸ್ವಗ್ರಾಮದಲ್ಲಿ ನೆರವೇರಿದೆ.
READ | ಶಿವಮೊಗ್ಗದಲ್ಲಿ ಭಾರೀ ಮಳೆ, ಹಲವೆಡೆ ಧರೆಗುರುಳಿದ ಮರಗಳು, ರಸ್ತೆಯಿಡೀ ನೀರು
ನಡೆದಿದ್ದೇನು?
ಅನೀದ್ ಅವರು ಲಾರಿ ನಿರ್ವಾಹಕರಾಗಿದ್ದು, ಮಂಗಳವಾರದಂದು ದಾವಣಗೆರೆ- ಶಿವಮೊಗ್ಗ- ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಬರುವಾಗ ನಾಲೆಯ ಬಳಿ ಜನ ಗುಂಪುಗೂಡಿರುವುದನ್ನು ಕಂಡಿದ್ದಾನೆ. ನಾಲೆಯಲ್ಲಿ ವೃದ್ಧನೊಬ್ಬ ತೇಲಿಕೊಂಡು ಹೋಗುತಿದ್ದ. ಆಗ ರಕ್ಷಿಸಬೇಕೆಂದು ನಾಲೆಗೆ ಹಾರಿ ನಾಪತ್ತೆಯಾಗಿದ್ದ.
ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರು. ಆಗ ಭದ್ರಾವತಿಯ ಹೊಸಮನೆ ನಿವಾಸಿ ಸೀತಮ್ಮ (67) ಎಂಬುವವರ ಶವ ಸಿಕ್ಕಿದೆ. ಇವರಿಗೆ ಆರೋಗ್ಯದ ಸಮಸ್ಯೆ ಇತ್ತು ಎಂದು ತಿಳಿದುಬಂದಿದೆ. ಇವರು ಏಪ್ರಿಲ್ 26ರಂದು ಮನೆಯಿಂದ ನಾಪತ್ತೆಯಾಗಿದ್ದರು. ಇವರ ಮೃತ ದೇಹ ದೇಗರಹಳ್ಳಿ ಬಳಿ ಸಿಕ್ಕಿದೆ. ವೃದ್ಧನ ಶವದ ಗುರುತು ಇದುವರೆಗೆ ಪತ್ತೆಯಾಗಿಲ್ಲ.
ಸಂಕಷ್ಟದಲ್ಲಿ ಯುವಕನ ಕುಟುಂಬ
ಅಪರಿಚಿತ ವೃದ್ಧನ ರಕ್ಷಿಸುವುದಕ್ಕಾಗಿ ಭದ್ರಾ ನಾಲೆಗೆ ಹಾರಿ ಮೃತಪಟ್ಟಿರುವ ಯುವಕನ ಕುಟುಂಬ ಸಂಕಷ್ಟದಲ್ಲಿದೆ. ಆತನ ತಾಯಿ, ವಿಕಲಚೇತನ ಸಹೋದರ ಮತ್ತು ಸಹೋದರಿ ಇದ್ದು, ಕುಟುಂಬಕ್ಕೆ ಅನೀದ್ ಆಸರೆಯಾಗಿದ್ದ. ಸಾವಿನಿಂದ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.