ಸುದ್ದಿ ಕಣಜ.ಕಾಂ | TALUK | RELIGIOUS
ತೀರ್ಥಹಳ್ಳಿ: ತಾಲೂಕಿನ ಹಣಗೆರೆಕಟ್ಟೆಯಲ್ಲಿರುವ ಧಾರ್ಮಿಕ ಕೇಂದ್ರಕ್ಕೆ ಬರುವ ವಾಹನಗಳನ್ನು ಸ್ಥಳೀಯರೇ ಪರಿಶೀಲಿಸುತ್ತಿದ್ದಾರೆ. ಇದಕ್ಕೆ ಕಾರಣ, ಭಕ್ತರಿಂದಾಗುತ್ತಿರುವ ಕಾನೂನು ಉಲ್ಲಂಘನೆ!
ಹೌದು, ರಾಜ್ಯದ ಪ್ರಸಿದ್ಧ ಸೌಹಾರ್ದ ಕೇಂದ್ರವಾಗಿರುವ ಇಲ್ಲಿಗೆ ಕರ್ನಾಟಕವಷ್ಟೇ ಅಲ್ಲದೇ ನೆರೆಯ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಪ್ರಾಣಿ ಬಲಿ ನೀಡುತ್ತಾರೆ. ಇದನ್ನು ಗ್ರಾಮಸ್ಥರು ನಿರಂತರ ವಿರೋಧಿಸುತ್ತಲೇ ಬಂದಿದ್ದಾರೆ. ಜಿಲ್ಲಾಡಳಿತ ಕೂಡ ಪ್ರಾಣಿ ಬಲಿಗೆ ಬ್ರೇಕ್ ಹಾಕಿತ್ತು.
ಕುರಿ-ಕೋಳಿ ಇದ್ದರೆ ವಾಹನವನ್ನು ಪಕ್ಕಕ್ಕೆ ನಿಲ್ಲಿಸಿ, ಭಕ್ತರನ್ನು ಮಾತ್ರ ದೇಗುಲದ ಒಳಗೆ ಬಿಡುವ ಮೂಲಕ ಪ್ರಾಣಿ ಬಲಿ ಕೊಡದಂತೆ ನೋಡಿಕೊಳ್ಳುತ್ತಿದ್ದಾರೆ. ಅಮಾವಾಸೆ, ಹುಣ್ಣಿಮೆಯಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ಈ ವೇಳೆ, ಪ್ರಾಣಿ ಬಲಿಯು ನಡೆಯುತ್ತಿದೆ.
ನಿಷೇಧಕ್ಕಿಲ್ಲ ಕಿಮ್ಮತ್ತು ಮುಂದುವರಿದ ಬಲಿ
300-500 ಕೋಳಿ, 5-10 ಕುರಿ, ವಾರದ ಕೊನೆಯ ದಿನವಾದ ಭಾನುವಾರದಂದು 1,500ಕ್ಕೂ ಹೆಚ್ಚು ಕೋಳಿ ಹಾಗೂ 15-20 ಕುರಿಗಳನ್ನು ಬಲಿ ಕೊಡಲಾಗುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ವಚ್ಛ ವಾತಾವರಣ ಮತ್ತೆ ಹಾಳಾಗುವ ಸಾಧ್ಯತೆ
ಕೋವಿಡ್ ಮೊದಲನೇ ಅಲೆ ಆರಂಭ ಆದಾಗಿನಿಂದ ಧಾರ್ಮಿಕ ಕೇಂದ್ರ ಹಾಗೂ ಅದಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದ ಪರಿಸರ ಸ್ವಚ್ಛವಾಗಿದೆ. ಒಂದುವೇಳೆ, ಮತ್ತೆ ಪ್ರಾಣಿ ಬಲಿ ಆರಂಭವಾದರೆ, ಅರಣ್ಯದಲ್ಲಿ ಅಡುಗೆ ಮಾಡುವುದು, ಕಸ ಕಡ್ಡಿ ಸೇರಿದಂತೆ ತ್ಯಾಜ್ಯ ಸಂಗ್ರಹಗೊಳ್ಳಲಿದೆ. ಇದರಿಂದ ಹಣಗೆರೆ, ಕೆರೆಹಳ್ಳಿ, ಸುತ್ತಮುತ್ತಲ ಗ್ರಾಮಸ್ಥರಲ್ಲಿ ರೋಗದ ಭೀತಿ ಎದುರಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಗ್ರಾಮಸ್ಥರೇ ಭಕ್ತರನ್ನು ನಿಯಂತ್ರಿಸಲು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಿದ್ದಾರೆ.
ಧಾರ್ಮಿಕ ಕೇಂದ್ರಕ್ಕೆ ಬಂದಿದ್ದ ಭಕ್ತರು ಕುರಿ, ಕೋಳಿ ತಂದಿದ್ದರು. ಹೀಗಾಗಿ, ಗ್ರಾಮಸ್ಥರನ್ನು ಅದನ್ನು ವಿರೋಧಿಸಿದರು. ಇದೇ ಕಾರಣಕ್ಕೆ ಭಾರಿ ವಾಕ್ಸಮರ ಉಂಟಾಗಿದೆ. ಣಮಥೃ, ಧಾರ್ಮಿಕ ಕೇಂದ್ರಕ್ಕೆ ಖಾಲಿ ಕೈಯಿಂದಲೇ ಕಳುಹಿಸಿ ವಾಪಸ್ ಬಂದ ಬಳಿಕ ಭಕ್ತರು ತಂದಿದ್ದ ಪ್ರಾಣಿಗಳನ್ನು ಅವರಿಗೆ ಒಪ್ಪಿಸಲಾಯಿತು.
ಅಧಿಕಾರಿಗಳು ವಹಿಸಬೇಕಿದೆ ಜಾಗೃತಿ
ತಹಸೀಲ್ದಾರ್ ಅವರು ಪ್ರಾಣಿ ಬಲಿ ಮಾಡಿ ನಿಷೇಧವೇನೋ ಹೇರಿದ್ದಾರೆ. ಆದರೆ, ಅದು ಕಾಗದಕ್ಕೆ ಮಾತ್ರ ಸೀಮಿತವಾಗಬಾರದು. ಅಧಿಕಾರಿಗಳನ್ನು ನಿಯೋಜಿಸಿ ಪ್ರಾಣಿ ಬಲಿ ನೀಡುವುದನ್ನು ಸಂಪೂರ್ಣ ನಿಷೇಧಕ್ಕೆ ತರುವಲ್ಲಿ ಕ್ರಮಕೈಗೊಳ್ಳಬೇಕು. ಸ್ಥಳೀಯರಿಗೆ ನೆರವು ನೀಡಬೇಕು.
https://www.suddikanaja.com/2021/09/15/illegal-construction-of-religoius-centres/