ಸುದ್ದಿ ಕಣಜ.ಕಾಂ | DISTRICT | POLITICS
ಶಿವಮೊಗ್ಗ: ಕಿಮ್ಮನೆ ರತ್ನಾಕರ್ ಅವರು ಪಕ್ಷದ ಜಿಲ್ಲಾ ಮಟ್ಟದ ಸಭೆಯಲ್ಲಿ ಬಳಸಿದ ಆ ಒಂದು ಪದ ಎಲ್ಲರನ್ನು ಕೆಣಕಿತು. ಕೆಲಹೊತ್ತು ಗೊಂದಲಕ್ಕೆ ಕಾರಣವಾಯಿತು.
ಮಾಜಿ ಸಚಿವ ಕಿಮ್ಮನೆ ಅವರು ವೇದಿಕೆಯಲ್ಲಿ ಮಾತನಾಡುವಾಗ, ‘ಅಲೆಮಾರಿ’ ಎಂಬ ಪದ ಪ್ರಯೋಗ ಮಾಡಿದ್ದು, ಬೇರೆಯ ಪಕ್ಷದಿಂದ ‘ಕೈ’ ಹಿಡಿದವರನ್ನು ನಾಟಿತು. ಅದರಿಂದ ರೊಚ್ಚಿಗೆದ್ದರು. ಇದರಿಂದ ಮಾತಿಗೆ ಮಾತು ಬೆಳೆಯಿತು. ನಂತರ, ಕಿಮ್ಮನೆ ಸಭೆಯಿಂದ ನಿರ್ಗಮಿಸಿದರು.
READ | ಕಾರು ಚಾಲಕನ ಎಡವಟ್ಟು, ಶಿಕಾರಿಪುರ ರಸ್ತೆಯಲ್ಲಿ ಭೀಕರ ಸರಣಿ ಅಪಘಾತ
ಸಭೆಯಲ್ಲಿ ನಡೆದಿದ್ದೇನು?
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಕರೆಯಲಾಗಿದ್ದ ಜಿಲ್ಲಾ ಮಟ್ಟದ ಸಭೆಯಲ್ಲಿ ಕಿಮ್ಮನೆ ಸ್ವಲ್ಪ ವಿಳಂಬದಿಂದಲೇ ಆಗಮಿಸಿದ್ದರು. ಅಷ್ಟೊತ್ತಿಗೆ ಹಲವರು ಮಾತಾಡಿಯಾಗಿತ್ತು. ಹೀಗಾಗಿ, ಆಗಮಿಸಿದ ಕೆಲ ಹೊತ್ತಿಗೆ ಕಿಮ್ಮನೆ ಅವರನ್ನು ಮಾತನಾಡಲು ಆಹ್ವಾನಿಸಲಾಯಿತು.
ಆಗ ಕಿಮ್ಮನೆ ರತ್ನಾಕರ್ ಅವರು, ‘ಅಲೆಮಾರಿಗಳಿಂದ ಕಾಂಗ್ರೆಸ್ಗೆ ನಷ್ಟ’ ಎಂದು ಆರೋಪಿಸಿದರು.
ಮಾಜಿ ಸಚಿವ, ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರಿಗಾಗಿ ಕಾಂಗ್ರೆಸ್ ಹೋರಾಟ ಮಾಡಿದೆ. ಈಗ ಸಂತ್ರಸ್ತರ ಸಮಿತಿಯ ಬ್ಯಾನರ್ ಅಡಿ ಜೆಡಿಎಸ್ ಮುಖಂಡರು ಮತ್ತು ಜೆಡಿಎಸ್ ಬಾವುಟದೊಂದಿಗೆ ಕೆಲವು ಕಾಂಗ್ರೆಸ್ ನಾಯಕರು ಹೋರಾಟದಲ್ಲಿ ಭಾಗವಹಿಸಿದ್ದು ಪಕ್ಷಕ್ಕೆ ಮುಜುಗರ ತಂದಿದೆ’ ನೇರವಾಗಿ ಟೀಕಿಸಿದರು.
ಜೆಡಿಎಸ್, ಬಿಜೆಪಿಯ ಪ್ರಮುಖರನ್ನು ಸೆಳೆದು ಚುನಾವಣೆಗೆ ನಿಲ್ಲಲು ತೀರ್ಥಹಳ್ಳಿಯಲ್ಲಿ ಹೊಸ ವೇದಿಕೆ ಸೃಷ್ಟಿ ಆಗುತ್ತಿದೆ. ಇದು ನನ್ನ ಗಮನಕ್ಕೆ ಬಂದಿದೆ. ಹೀಗಾಗಿ, ಕಾಂಗ್ರೆಸ್ ನಾಯಕರು ಅಲೆಮಾರಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.
READ | ಶಿವಮೊಗ್ಗ ದಸರಾ ರೂಪುರೇಷೆ ಪ್ರಕಟ, ಷರತ್ತುಗಳಡಿ ನಡೆಯಲಿದೆ ಹಬ್ಬ ಆಚರಣೆ, ಇಲ್ಲಿದೆ ಕಂಪ್ಲೀಟ್ ಮಾಹಿತಿ
ಆಕ್ಷೇಪ, ಗೊಂದಲ, ಆರ್.ಎಂ.ಎಂ. ಮಧ್ಯಪ್ರವೇಶ
ಕಿಮ್ಮನೆ ಅವರು ತೀಕ್ಷ್ಣವಾಗಿ ಟೀಕಾಪ್ರಹಾರ ಮುಂದುವರಿಸುತ್ತಲೇ ಇದ್ದರು. ತಕ್ಷಣ, ಮಧ್ಯ ಪ್ರವೇಶಿಸಿದ ಪಂಚಾಯಿತಿ ಸದಸ್ಯರು, ‘ನಾವೂ ಜೆಡಿಎಸ್ ನಲ್ಲಿದ್ದೇವು. ಈಗ ಕಾಂಗ್ರೆಸ್ ಸೇರ್ಪಡೆಯಾಗಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇವೆ. ಪಕ್ಷಾಂತರ ಕಾಮನ್’ ಎಂದು ಹೇಳಿದರು.
ಈ ಎಲ್ಲ ವಿರೋಧಗಳ ನಡುವೆ ಇರುಸು ಮುರುಸು ಅನುಭವಿಸಿದ ಮಂಜುನಾಥ್ ಗೌಡ ಅವರು ಕಿಮ್ಮನೆ ಅವರನ್ನು ವೇದಿಕೆ ಮೇಲೆ ಕುಳಿತುಕೊಳ್ಳಲು ಮನವಿ ಮಾಡಿದರು. ಆದರೆ, ಕಿಮ್ಮನೆ ವೇದಿಕೆಯಿಂದ ನಿರ್ಗಮಿಸಿದರು.
ಸಭೆಯಲ್ಲಿ ಕೆಪಿಸಿಸಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ವಿಭಾಗದ ರಾಜ್ಯಾಧ್ಯಕ್ಷ ಮಾಜಿ ಸಂಸದ ಸಿ. ನಾರಾಯಣಸ್ವಾಮಿ, ರಾಜ್ಯ ಸಂಚಾಲಕರಾದ ವಿಜಯಸಿಂಗ್, ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸದಸ್ಯರು, ಮಾಜಿ ಸದಸ್ಯರು, ಪಕ್ಷದ ಪ್ರಮುಖರು ಇದ್ದರು. ಜಿಲ್ಲಾಧ್ಯಕ್ಷ ಎಚ್.ಎಸ್. ಸುಂದರೇಶ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಪ್ರಮುಖರಾದ ಆರ್. ಪ್ರಸನ್ನಕುಮಾರ್, ಕೆ.ಬಿ. ಪ್ರಸನ್ನಕುಮಾರ್, ವಿದ್ಯಾಶಂಕರ್, ಘೋರ್ಪಡೆ, ಡಾ. ಶ್ರೀನಿವಾಸ್ ಕರಿಯಣ್ಣ, ಎಸ್.ಪಿ. ದಿನೇಶ್, ವೇದಾ ವಿಜಯಕುಮಾರ್, ವಿನಿತಾ, ರಾಮೇಗೌಡ, ಚಂದ್ರಭೂಪಾಲ್ ಉಪಸ್ಥಿತರಿದ್ದರು.
https://www.suddikanaja.com/2021/09/26/kimmane-ratnakar-allegation-against-rm-manjunathgowda/